ಹುಮನಾಬಾದ್: ಪಟ್ಟಣದ ಬಸವೇಶ್ವರ ಬಡಾವಣೆಯಲ್ಲಿ ಚರಂಡಿ, ರಸ್ತೆ ಸೌಕರ್ಯ ಕಲ್ಪಿಸದ ಪುರಸಭೆ ಕ್ರಮದ ಕುರಿತು ‘ಪ್ರಜಾವಾಣಿ’ ಪತ್ರಿಕೆಯಲ್ಲಿ ಕಳೆದ ತಿಂಗಳು ಪ್ರಕಟಿಸಿದ ಸುದ್ದಿಯಿಂದ ಎಚ್ಚೆತ್ತುಕೊಂಡ ಸ್ಥಳಿಯ ಪುರಸಭೆ ಆಡಳಿತ ಬಡಾವಣೆಯಲ್ಲಿ ಚರಂಡಿ ಕಾಮಗಾರಿ ಪೂರ್ಣಗೊಳಿಸಿ, ರಸ್ತೆ ಕಾಮಗಾರಿ ಕೈಗೆತ್ತಿಕೊಂಡಿದೆ.ಬಡಾವಣೆ ಅಸ್ತಿತ್ವಕ್ಕೆ ಬಂದು ಎರಡು ದಶಕ ಗತಿಸಿದ್ದು, ಮೂಲ ಸೌಕರ್ಯ ಕಲ್ಪಿಸುವಂತೆ ಬಡಾವಣೆ ನಿವಾಸಿಗಳು ಪುರಸಭೆ ಮುಖ್ಯಾಧಿಕಾರಿ ಹಾಗೂ ಸಂಬಂಧಪಟ್ಟ ವಾರ್ಡ್ ಸದಸ್ಯರಿಗೆ ಹಲವು ಬಾರಿ ಮಾಡಿಕೊಂಡ ಮನವಿಯಿಂದ ಯಾವುದೇ ಪ್ರಯೋಜನ ಆಗಿದೇ ಇರುವುದರಿಂದ ಬೇಸತ್ತ ಸುದ್ದಿಗಾರರ ಎದುರು ನೋವು ತೋಡಿಕೊಂಡಿದ್ದರು. ಸುದ್ದಿ ಪ್ರಕಟಗೊಂಡ ಕೆಲವೇ ದಿನಗಳಲ್ಲಿ ನಡೆದ ಪುರಸಭೆ ಸಾನ್ಯ ಸಭೆಯಲ್ಲಿ ಚರಂಡಿ ಹಾಗೂ ರಸ್ತೆ ನಿರ್ಮಾಣ ಸಂಬಂಧ ರೂ. 6ಲಕ್ಷ ತೆಗೆದಿರಿಸಿ, ಈಗಾಗಲೇ ಕಾಮಗಾರಿಯನ್ನು ಆರಂಭಿಸಿದ್ದಾರೆ.
ಸಂತಸ : ಎರಡು ದಶಕಗಳಿಂದ ಆಗದ ಕಾಮಗಾರಿ ಪತ್ರಿಕಾ ವರದಿಯಿಂದ ಎಚ್ಚೆತ್ತುಕೊಂಡು ಕೇವಲ ಒಂದು ತಿಂಗಳೊಳಗೆ ಕಾಮಗಾರಿ ಆರಂಭಿಸಿರುವ ಪುರಸಭೆ ಆಡಳಿತದ ಕಾರ್ಯಕ್ಕೆ ಬಡಾವಣೆ ನಿವಾಸಿಗಳಾದ ರಾಚಯ್ಯಸ್ವಾಮಿ, ಸಂಗಯ್ಯಸ್ವಾಮಿ ಬಡಿಗೇರ,ಶಂಕರರಾವ ಮೋತಕಪಳ್ಳಿ, ರಾಜೇಶ್ವರ ಸೋನಿ, ಪ್ರೊ.ಬಿರಾದಾರ. ಪ್ರೊ. ಮಠಪತಿ ಮೊದಲಾದವರು ಸಂತಸ ವ್ಯಕ್ತಪಡಿಸಿದ್ದಾರೆ. ಜೊತೆಗೆ ಗುಣಮಟ್ಟದ ಕಾಮಗಾರಿ ಕೈಗೊಳ್ಳುವಂತೆ ಈ ಮೂಲಕ ಮನವಿ ಮಾಡಿಕೊಂಡಿದ್ದಾರೆ.