ಸೋಮವಾರಪೇಟೆ: ಇಲ್ಲಿ ನಿರ್ಮಾಣಗೊಂಡಿರುವ ಚರಂಡಿ ಕಾಮಗಾರಿ ಕಳಪೆಯಿಂದ ಕೂಡಿದೆ ಎಂದು ಆರೋಪಿಸಿ ಜಯಕರ್ನಾಟಕ ಸಂಘಟನೆ ಪದಾಧಿಕಾರಿಗಳು ಗುರುವಾರ ಪಟ್ಟಣ ಪಂಚಾಯಿತಿಗೆ ಮುತ್ತಿಗೆ ಹಾಕಿದರು.
ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಶನಿವಾರಸಂತೆ ರಸ್ತೆಯಲ್ಲಿರುವ ನಂದಿ ಚಾಟ್ಸ್ ಮುಂಭಾಗದ ಚರಂಡಿ ದುರಸ್ತಿ ಕಾಮಗಾರಿಯನ್ನು ರೂ. 1.05 ಲಕ್ಷ ವೆಚ್ಚದಲ್ಲು ಮಾಡಲಾಗಿದೆ. ಆದರೆ ಸಮರ್ಪಕವಾಗಿ ಕಾಮಗಾರಿ ನಿರ್ವಹಿಸದೆ, ಕಿತ್ತು ಹೋಗಿರುವ ಜಾಗಕ್ಕೆ ತೇಪೆ ಹಾಕಿ ಸಿಮೆಂಟ್ ಹಾಕಲಾಗಿದೆ ಎಂದು ಆರೋಪಿಸಿದರು.
ಕಾಮಗಾರಿ ನಡೆದಿರುವ ಸ್ಥಳಕ್ಕೆ ಅಧ್ಯಕ್ಷ ಹಾಗೂ ಮುಖ್ಯಾಧಿಕಾರಿಯನ್ನು ಕರೆದೊಯ್ದ ಪ್ರತಿಭಟನಾಕಾರರು ಕಾಮಗಾರಿಯ ವಾಸ್ತವ ಸ್ಥಿತಿಯನ್ನು ತೋರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಎನ್.ಎಸ್.ಮೂರ್ತಿ, ಈಗಾಗಲೇ ಸಂಬಂಧಿಸಿದ ಗುತ್ತಿಗೆದಾರರಿಗೆ ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಸೂಚಿಸಿದ್ದೇವೆ. ಕಾಮಗಾರಿ ಬಗ್ಗೆ ಗಮನಹರಿಸಿ ಅವುಗಳನ್ನು ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.
ಸಂಘಟನೆಯ ತಾಲ್ಲೂಕು ಅಧ್ಯಕ್ಷ ಸುರೇಶ್ ಶೆಟ್ಟಿ, ಸದಸ್ಯರಾದ ದೊರೆ, ಮಸಗೋಡು ಸತೀಶ್, ರಾಜೀವ್, ರಫೀಕ್, ರವಿ, ಲೋಕೇಶ್, ಅಜಿತ್, ಸುಮಂತ್, ಶರೀಫ್, ಆಟೋ ರಮೇಶ್, ಎಂ.ಜಿ.ರಸ್ತೆ ನಿವಾಸಿಗಳಾದ ರವಿ, ಚಂದ್ರು ಪ್ರತಿಭಟನೆ ಭಾಗವಹಿಸಿದ್ದರು.