ಕೊಪ್ಪಳ: ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ರಸ್ತೆಯ ಗುಣಮಟ್ಟ ಕಳಪೆಯಾಗಿದೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಾಲ್ಲೂಕು ಘಟಕದ ಕಾರ್ಯಕರ್ತರು ಶನಿವಾರ ರಸ್ತೆ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಿದ ಘಟನೆ ತಾಲ್ಲೂಕಿನ ಲಾಚನಕೇರಿಯಲ್ಲಿ ನಡೆದಿದೆ.
ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ವಿಜಯಕುಮಾರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಕೆಲವೆಡೆ ರಸ್ತೆಯನ್ನು ಅಗೆಯುವ ಮೂಲಕ ಕಾಮಗಾರಿಗೆ ಅಡ್ಡಿಪಡಿಸಿದರು.
ಮುಖ್ಯಮಂತ್ರಿಗಳ ರೋಜಗಾರ ಯೋಜನೆಯಡಿ 8.83 ಲಕ್ಷ ರೂಪಾಯಿ ವೆಚ್ಚದಲ್ಲಿ 2 ಕಿ.ಮೀ. ಉದ್ದದ ರಸ್ತೆಯನ್ನು ಅಭಿವೃದ್ಧಿಗೊಳಿಸುವ ಕಾರ್ಯ ನಡೆದಿದೆ. ಆದರೆ, ಅಂದಾಜುಪತ್ರಿಕೆಯಲ್ಲಿ ನಿಗಿದಪಡಿಸಿದ ಗುಣಮಟ್ಟವನ್ನು ಕಾಯ್ದುಕೊಳ್ಳುವಲ್ಲಿ ಗುತ್ತಿಗೆದಾರರು ವಿಫಲವಾಗಿದ್ದಾರೆ ಎಂದು ವಿಜಯಕುಮಾರ ದೂರಿದರು.
ಕೂಡಲೇ ರಸ್ತೆ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು. ಯಾವುದೇ ಕಾರಣಕ್ಕೂ ಹಣವನ್ನು ಬಿಡುಗಡೆ ಮಾಡಬಾರದು ಹಾಗೂ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಒತ್ತಾಯಿಸಿದರು.
ವೇದಿಕೆಯ ಗ್ರಾಮ ಘಟಕದ ಕಾರ್ಯಕರ್ತರಾದ ಲಕ್ಷ್ಮಪ್ಪ, ಸಂಜೀವಪ್ಪ, ನಾರಾಯಣಗೌಡ ಪೊಲೀಸ್ಪಾಟೀಲ, ಉಮೇಶಪ್ಪ, ಸಣ್ಣಫಕೀರಪ್ಪ ಹಾಗೂ ಇತರರು ಈ ಸಂದರ್ಭದಲ್ಲಿ ಹಾಜರಿದ್ದರು.