ಮಾಯಕೊಂಡ: ಬೀರೂರಿನಿಂದ ಸಮ್ಮಸಗಿಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ನಿರ್ಮಾಣ ಕಾಮಗಾರಿ ವಿಳಂಬವಾಗಿದ್ದು, ದುರಸ್ತಿ ಕಾರ್ಯವೂ ಸಮರ್ಪಕವಿಲ್ಲದ ಕಾರಣ ಸಂಚಾರ ಕ್ಕೆ ತೊಂದರೆಯಾಗಿದೆ.
ಬೀರೂರಿನಿಂದ ಸಮ್ಮಸಗಿಗೆ ಸಂಪರ್ಕ ಕಲ್ಪಿಸುವ 102 ಕಿ.ಮೀ ದೂರವುಳ್ಳ ರಾಜ್ಯ ಹೆದ್ದಾರಿ ನಿರ್ಮಾಣಕ್ಕೆ ಸುಮಾರು 202 ಕೋಟಿ ` ಹಣ ಬಿಡುಗಡೆಯಾಗಿದೆ. ಬಾಂಬೆ ಮೂಲದ ಗ್ಯಾಮನ್ ಇಂಡಿಯಾ ಕಂಪೆನಿ ನಿರ್ಮಾಣದ ಗುತ್ತಿಗೆ ಪಡೆದಿದೆ.
ಕಾಮಗಾರಿ ಕೈಗೆತ್ತಿಕೊಂಡ ಕಂಪೆನಿಯು ರಸ್ತೆಗೆ ಟಾರ್ ಹಾಕಿ ಗುಂಡಿ ಮುಚ್ಚುವ ಬದಲಾಗಿ ಮಣ್ಣು ಮಿಶ್ರಿತ ಕಲ್ಲುಗಳನ್ನು ಹಾಕಿ, ರಸ್ತೆಯನ್ನು ದುರಸ್ತಿಗೊಳಿಸಿದೆ. ನಿರಂತರ ವಾಹನಗಳ ಸಂಚಾರದಿಂದ ಕಲ್ಲುಗಳು ರಸ್ತೆ ತುಂಬಾ ಹರಡಿ ವಾಹನ ಸಂಚರಿಸಲು ಪರದಾಡುವಂತಾಗಿದೆ. ಗುಂಡಿಗಳಿಗೆ ಹಾಕಿರುವ ಮಣ್ಣಿನಿಂದ ಹೆಚ್ಚು ಪ್ರಮಾಣದಲ್ಲಿ ದೂಳು ಉಂಟಾಗಿ, ವಾಹನಗಳು ಕಾಣಲಾರದಂತೆ ಮುಚ್ಚಿಕೊಳ್ಳುತ್ತಿದೆ.
ದ್ವಿಚಕ್ರ ವಾಹನ ಸವಾರರಂತೂ ತೀವ್ರ ತೊಂದರೆಗೊಳಗಾಗಿದ್ದಾರೆ. ಕಲ್ಲುಗಳನ್ನು ತಪ್ಪಿಸಿ ವಾಹನ ಚಾಲನೆ ಮಾಡಲು ಹೋಗಿ ಅಪಘಾತಕ್ಕೀಡಾಗುವುದು ಸಾಮಾನ್ಯವಾಗಿದೆ. ಬಾಡಾ, ರಾಮಗೊಂಡನಹಳ್ಳಿ, ಅತ್ತಿಗೆರೆ, ದ್ಯಾಮೇನಹಳ್ಳಿ , ತೋಳಹುಣಸೆ, ಕುರ್ಕಿ ಗ್ರಾಮಸ್ಥರಂತೂ ದೂಳಿನಿಂದ ಸಾಕಷ್ಟು ಹಿಂಸೆ ಅನುಭವಿಸುತ್ತಿದ್ದಾರೆ. ಹಿಂದೆ ರಸ್ತೆ ಮಾಡುವ ನೆಪದಲ್ಲಿ ವಿಳಂಬವಾದಾಗ ತೊಂದರೆಯಾಗಿತ್ತು, ಈಗ ಅದಕ್ಕಿಂತ ಹೆಚ್ಚು ತೊಂದರೆಯಾಗಿದೆ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
ಶೀಘ್ರ ಉತ್ತಮ ರಸ್ತೆ
ನಿರ್ಮಾಣ ಕಾಮಗಾರಿ ಆರಂಭಿಸಬೇಕು. ಕಾಮಗಾರಿ ಗುತ್ತಿಗೆ ಪಡೆದ ಕಂಪೆನಿಯವರು ಇದೇ ರೀತಿ ನಿರ್ಲಕ್ಷ್ಯ ಮುಂದುವರಿಸಿದರೆ ರಾಜ್ಯ ಹೆದ್ದಾರಿ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎನ್ನುತ್ತಾರೆ ತಾಲ್ಲೂಕು ಪಂಚಾಯ್ತಿ ಸದಸ್ಯ ರೇವಣಸಿದ್ದಪ್ಪ, ಎಂ.ಡಿ. ಸುರೇಶ್, ಸೈಪ್ವುಲ್ಲಾ, ರುದ್ರಪ್ಪ, ವೀರೇಶ.