ಕೊಳ್ಳೇಗಾಲ: ತಾಲ್ಲೂಕಿನ ಕಾಮಗೆರೆ ಸುತ್ತಮುತ್ತಲ ಜಮೀನುಗಳಲ್ಲಿ ಚಿರತೆ ಹಾವಳಿ ಹೆಚ್ಚಾಗಿದ್ದು, ರೈತರು ಆತಂಕಕ್ಕೀಡಾಗಿದ್ದಾರೆ.ಲೊಕ್ಕನಹಳ್ಳಿ ರಸ್ತೆಯ ಮೀನಹಳ್ಳ ಸಮೀಪದಲ್ಲಿ ದಾಸ ಎಂಬುವವರು ಕುರಿ ಮೇಯಿಸುತ್ತಿದ್ದಾಗ ಚಿರತೆಯೊಂದು ಕುರಿ ಮೇಲೆ ದಾಳಿ ನಡೆಸಿ ಸಾಯಿಸುವ ವಿಫಲಯತ್ನ ನಡೆಸಿದೆ. ರಾಮು ಎಂಬುವವರ ಕಬ್ಬಿನ ತೊಟದಲ್ಲಿಯೂ ಸಹ ಚಿರತೆ ಓಡಾಟ ನಡೆಸುವ ಮೂಲಕ ರೈತರಲ್ಲಿ ಆತಂಕ ನಿರ್ಮಾಣಗೊಂಡಿದೆ.
ಗುಂಡಾಲ್ ಜಲಾಶಯ, ಕಾಮಗೆರೆ ಬಳಿ ಸಕ್ಕರೆ ಕಾರ್ಖಾನೆ ಸ್ಥಾಪನೆಗಾಗಿ ನೂರಾರು ಎಕರೆ ಜಮೀನಿನಲ್ಲಿ ಬೆಳೆದುನಿಂತಿದ್ದ ಪೊದೆಗಳನ್ನು ತೆರವುಗೊಳಿಸಿರುವುದೇ ಚಿರತೆ ಜಮೀನುಗಳಲ್ಲಿ ಪ್ರತ್ಯಕ್ಷಗೊಳ್ಳಲು ಕಾರಣವಾಗಿದೆ.
ಚಿರತೆ ಬಗ್ಗೆ ಸೂಕ್ತ ಕ್ರಮಕೈಗೊಳ್ಳುವಂತೆ ಅರಣ್ಯ ಸಿಬ್ಬಂದಿ ಗಮನ ಸೆಳೆಯಲಾಗಿದ್ದರೂ ಈವರೆಗೂ ಅರಣ್ಯ ಇಲಾಖೆ ಅಧಿಕಾರಿಗಳು ಇತ್ತ ಮುಖಮಾಡಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಚಿರತೆ ಹಾವಳಿಯಿಂದ ರೈತರು ಜಮೀನುಗಳಿಗೆ ಹೋಗಲು ಹಿಂಜರಿಯುವ ಸ್ಥಿತಿ ನಿರ್ಮಾಣವಾಗಿದೆ.ಅನಾಹುತ ಸಂಭವಿಸುವ ಮುನ್ನವೇ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಸೂಕ್ತ ಕ್ರಮಕೈಗೊಳ್ಳಲು ಮುಂದಾಗಬೇಕೆಂದು ಗುರು, ಶೇಖರ್ ರಾಮು, ದಾಸಪ್ಪ ಇತರರು ಒತ್ತಾಯಿಸಿದ್ದಾರೆ.