ನವದೆಹಲಿ (ಪಿಟಿಐ): ಕಾಮನ್ವಲ್ತ್ ಕ್ರೀಡಾಕೂಟ ಭ್ರಷ್ಟಾಚಾರ ಹಗರಣದ ತನಿಖೆಯನ್ನು ಇನ್ನಷ್ಟು ಚುರುಕುಗೊಳಿಸಿರುವ ಸಿಬಿಐ ಗುರುವಾರ ತಾಲ್ಕಟೋರಾ ಮತ್ತು ಶಿವಾಜಿ ಕ್ರೀಡಾಂಗಣ ನವೀಕರಣ ಕಾರ್ಯದಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಸ್ಥೆಗಳ ಕಾರ್ಯಕರ್ತರಿಗೆ ಸಂಬಂಧಿಸಿದ 18 ಕಡೆಗಳಲ್ಲಿ ರಾಷ್ಟ್ರವ್ಯಾಪಿ ಶೋಧ ನಡೆಸಿತು.
ಈ ಕ್ರೀಡಾಂಗಣಗಳ ನವೀಕರಣದಲ್ಲಿ ಪಾಲ್ಗೊಂಡಿದ್ದ ಸಂಸ್ಥೆಗಳ ವಿರುದ್ಧ ಎರಡು ಪ್ರಕರಣಗಳನ್ನು ದಾಖಲಿಸಿದ ಸಿಬಿಐ, ಕ್ರೀಡಾಕೂಟದ ವೇಳೆಯಲ್ಲಿ ಸಮಾಲೋಚಕರ ನೇಮಕಾತಿಗೆ ಸಂಬಂಧಿಸಿದಂತೆಯೂ ಎರಡು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿತು ಎಂದು ಅಧಿಕೃತ ಮೂಲಗಳು ತಿಳಿಸಿವೆ.
ಸಿಬಿಐ ಸಿಬ್ಬಂದಿ ರಾಷ್ಟ್ರೀಯ ರಾಜಧಾನಿ ಪ್ರದೇಶ, ಕೋಲ್ಕತ್ತ ಮತ್ತು ಇತರ ನಗರಗಳಲ್ಲಿ ಬೆಳಿಗ್ಗ ನಸುಕಿನ ವೇಳೆಯಿಂದಲೇ ಶೋಧ ನಡೆಸಿದ್ದು, ಶೋಧಕಾರ್ಯ ಇನ್ನೂ ಮುಂದುವರೆದಿದೆ ಎಂದು ಮೂಲಗಳು ತಿಳಿಸಿವೆ.