ನವದೆಹಲಿ (ಪಿಟಿಐ): ಕಾಮನ್ವೆಲ್ತ್ ಕ್ರೀಡಾಕೂಟ (ಸಿಡಬ್ಲ್ಯುಜಿ)ದ ಹಗರಣಕ್ಕೆ ಸಂಬಂಧಿಸಿ `ಸಿಡಬ್ಲ್ಯುಜಿ' ಸಂಘಟನಾ ಸಮಿತಿ ಅಧ್ಯಕ್ಷರಾಗಿದ್ದ ಸುರೇಶ್ ಕಲ್ಮಾಡಿ ಮತ್ತು ಇತರರ ವಿರುದ್ಧ ಫೋರ್ಜರಿ, ವಂಚನೆ, ಸಂಚು ಮಾಡಿದ ಕಾರಣಕ್ಕಾಗಿ ದೋಷಾರೋಪ ಹೊರಿಸುವಂತೆ ವಿಶೇಷ ಸಿಬಿಐ ನ್ಯಾಯಾಲಯ ಆದೇಶಿಸಿದೆ.
ಕಲ್ಮಾಡಿ, ಒಲಿಪಿಂಕ್ ಸಮಿತಿಯ ಮಾಜಿ ಮಹಾ ಕಾರ್ಯದರ್ಶಿ ಲಲಿತ್ ಭಾನೋಟ್ ಮತ್ತು ಇತರ ಒಂಬತ್ತು ಜನರ ವಿರುದ್ಧ ಸ್ವಿಟ್ಜರ್ಲೆಂಡ್ನ `ಸ್ವಿಸ್ ಟೈಮಿಂಗ್ ಒಮೆಗಾ' ಕಂಪೆನಿಗೆ ಅಕ್ರಮವಾಗಿ ಗುತ್ತಿಗೆ ನೀಡಿ ಸರ್ಕಾರಿ ಬೊಕ್ಕಸಕ್ಕೆ ಭಾರಿ ನಷ್ಟ ಮಾಡಿದ್ದಕ್ಕಾಗಿ ಆರೋಪ ಸಿದ್ಧ ಪಡಿಸುವಂತೆ ಕೋರ್ಟ್ ಹೇಳಿದೆ. ಎಂಟು ಜನ ಆರೋಪಿಗಳು ಮತ್ತು ಮೂರು ಕಂಪೆನಿಗಳು ವಂಚನೆ, ಫೋರ್ಜರಿ ಹಾಗೂ ಸಂಚು ರೂಪಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಹಾಗಾಗಿ ಈ ಎಲ್ಲರ ವಿರುದ್ಧ ಭ್ರಷ್ಟಾಚಾರ ತಡೆ ಕಾಯ್ದೆ ಅಡಿ ಆರೋಪ ಸಿದ್ಧಪಡಿಸಬೇಕು ಎಂದು ಕೋರ್ಟ್ ಸೂಚಿಸಿದೆ.