ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಮಾಲೆಗೆ ಬೈರಾಪುರ ತಾಂಡಾ ತತ್ತರ

Last Updated 16 ಜೂನ್ 2011, 6:40 IST
ಅಕ್ಷರ ಗಾತ್ರ

ಗಜೇಂದ್ರಗಡ: ತಾಲ್ಲೂಕಿನ ಬೈರಾಪುರ ಎಂಬ ಕುಗ್ರಾಮದ ಜನರಿಗೆ ಮಾರಣಾಂತಿಕ ಕಾಮಾಲೆ ರೋಗ ಅಂಟಿಕೊಂಡಿದೆ. ಇದೇ ಕಾಯಿಲೆಗೆ ತುತ್ತಾಗಿ ಕಳೆದ ಮೂರು ತಿಂಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಈ ಕಾಯಿಲೆ ಯಾವುದು? ಇದರ ಸ್ವರೂಪ ಇದರಿಂದ ಉಂಟಾಗುವ  ಪರಿಣಾಮಗಳು ಯಾವುವು? ಎಂಬ ಪರಿಜ್ಞಾನ ಇವರಿಗೆ ಇಲ್ಲ.

70ಕ್ಕೂ ಅಧಿಕ ಮನೆಗಳನ್ನು ಹೊಂದಿರುವ ತಾಂಡಾದಲ್ಲಿ ವಾಸಿಸುವ ಬಹುತೇಕರು ಅನಕ್ಷರಸ್ಥರು. ಕುಡಿ ಯುವ ನೀರಿನಲ್ಲಿನ ದೋಷ ದಿಂದಾಗಿ ಉಲ್ಬಣಿಸಿರುವ ಕಾಮಾಲೆಯಿಂದ ಅನೇಕರು ಬಳಲುತ್ತಿದ್ದರಾದರೂ ಸೂಕ್ತ ಚಿಕಿತ್ಸೆ ಪಡೆಯದೇ ಗ್ರಾಮೀಣ ಪದ್ದತಿಯ ಚಿಕಿತ್ಸೆಗೆ ಮೊರೆ ಹೋಗಿ ಇನ್ನಷ್ಟು ಅಪಾಯವನ್ನು ಮೈಮೇಲೆ ಎಳೆದು ಕೊಳ್ಳುತ್ತಿದ್ದಾರೆ.

ಉದರ ಸಂಬಂಧಿ ನೋವು ಕಾಣಿಸಿ ಕೊಂಡು ಟೈಪಾಯಿಡ್ ಜ್ವರ, ತೀವ್ರ ವಾಗಿ ಕರಳುಗಳು ಊದಿಕೊಂಡು ಕಿಡ್ನಿ ವೈಪಲ್ಯವಾಗುವ ಮೂಲಕ ಈಗಾಗಲೇ ಮೂವರು ಸಾವನ್ನಪ್ಪಿದ್ದಾರೆ. ಸತ್ತವರು  ಬಹುತೇಕ ಜನರು ಇಪ್ಪತ್ತು ವಯಸ್ಸಿ ಗಿಂತ ಕಡಿಮೆ ವಯಸ್ಸಿನವರು.

ತಾಂಡಾದ ಮೀನಾಕ್ಷಿ ಶಿವನಪ್ಪ ಅಜ್ಮೀರ್ (13), ಶರಣಪ್ಪ ಹರಿ ಶ್ಚಂದ್ರಪ್ಪ ಪಮ್ಮಾರ(15), ದೇವಪ್ಪ ಕೇಶಪ್ಪ ಅಜ್ಮೀರ್(18) ಅವರು ಕಾಯಿ ಲೆಯಿಂದ ಸಾವನ್ನಪ್ಪಿದವರು. ಇವರ ಸಾವಿನಿಂದ ಗ್ರಾಮದಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.

ಕಾಯಿಲೆಯಿಂದ ಬಳಲುತ್ತಿ ರುವವರು  ವೈದ್ಯಕೀಯ ಚಿಕಿತ್ಸೆಗೆ ಮೊರೆ ಹೋಗದೆ ಕೇವಲ ತೋಳಿಗೆ ಬಳ್ಳಿ, ಮಣಿಕಟ್ಟಿಗೆ ಬರೆ ಹಾಕಿಸಿಕೊಂಡು ಅವರು ನೀಡಿದ ಗಿಡಮೂಲಿಕೆಯ ರಸವನ್ನೇ ಸೇವಿಸುತ್ತಿದ್ದಾರೆ.
ಕಾಯಿ ಉಲ್ಬಣಗೊಂಡ ನಂತರ ಕೆಲವರು ಬಾಗಲಕೋಟೆ, ಗದಗ, ರೋಣ, ಗಜೇಂದ್ರಗಡ, ಗಂಗಾವತಿ ಮತ್ತಿತರ ಕಡೆ ಇರುವ ಖಾಸಗಿ ವೈದ್ಯರ ಬಳಿ ತಪಾಸಣೆಗೆ ಒಳಗಾದರು ಕಾಯಿಲೆ ತಹಬದಿಗೆ ಬಾರದೆ ತೊಂದರೆ ಅನುಭವಿಸುತ್ತಿದ್ದಾರೆ.

ಸದ್ಯ ತಾಂಡಾದಲ್ಲಿ ತುಕಾರಾಮ ಲೋಕಪ್ಪ ಅಜ್ಮೀರ (15), ಹೇಮವ್ವ ಕೃಷ್ಣಪ್ಪ ಜಾಟೋತ್ತರ (22), ಕಿರಣ ಮುತ್ತಪ್ಪ ರಾಠೋಡ (7) ಸೇರಿದಂತೆ ಹತ್ತು ಜನರು  ಕಾಮಾಲೆಯಿಂದ ನರಳುತ್ತಿದ್ದಾರೆ. ಜೊತೆಗೆ ಇನ್ನಷ್ಟು ಜನರು ವಿಪರೀತ ಜ್ವರ, ಮೈಕೈ ನೋವು, ಮುಖದಲ್ಲಿ ಬಾವು ಬರುವುದು ಸೇರಿದಂತೆ ವಿವಿಧ ಕಾಯಿಲೆಗಳಿಂದ ಬಳಲುತ್ತಿದ್ದಾರೆ.

ತಿರುಗಿ ನೋಡದ ಆರೋಗ್ಯ ಇಲಾಖೆ ಮತ್ತು ಗ್ರಾ.ಪಂ:
ಕಳೆದ ಮೂರು ತಿಂಗಳಿನಿಂದ ತಾಂಡಾದ ಗ್ರಾಮಸ್ಥರು ವಿವಿಧ ಕಾಯಿಲೆಗಳಿಂದ ನರಳುತ್ತಿದ್ದು, ಇದಕ್ಕೆ ಕುಡಿಯುವ ನೀರು ಕಾರಣ ಎಂದು ಎಲ್ಲರೂ ಅಭಿಪ್ರಾಯಪಡುತ್ತಾರೆ.

 ಆದರೆ, ಆರೋಗ್ಯ ಇಲಾಖೆ ಮಾತ್ರ ಇವರತ್ತ ಒಮ್ಮೆಯು ತಿರುಗಿಯು ನೋಡಿಲ್ಲ. ಕುಡಿಯುವ ನೀರಿನ ತಪಾಸಣೆ ಮಾಡಿಸಿಲ್ಲ. ಗ್ರಾಮ ಪಂಚಾಯಿತಿ ಆಡಳಿತ ಕೂಡ ಜನರ ನೋವಿಗೆ ಕ್ಯಾರೆ ಅನ್ನುತ್ತಿಲ್ಲ. ಇದರಿಂದ ರೋಗಿಗಳು ಬೇರೆಯವರ ಮಾತುಗಳನ್ನು ಕೇಳಿ ಸಿಕ್ಕ ಸಿಕ್ಕ ಚಿಕಿತ್ಸೆಗೆ ಮೊರೆ ಹೋಗಿ ಅಪಾಯವನ್ನು ಹತ್ತಿರಕ್ಕೆ ಕರೆಯಿಸಿಕೊಂಡಿದ್ದಾರೆ.

`ತಾಂಡಾದಲ್ಲಿ ಹಿಂದಿನಿಂದಲೂ ಬಾವಿಯ ನೀರನ್ನು ಕುಡಿಯುತ್ತ ಬಂದಿದ್ದೇವೆ. ಕೆಲ ವರ್ಷಗಳಿಂದ ಕೊಳವೆ ಬಾವಿಯ ನೀರು ಪೂರೈಕೆ ಆಗುತ್ತಿದೆ ಯಾದರೂ ಸಮಪರ್ಕವಾಗಿ ಪೂರೈಕೆ ಆಗುತ್ತಿಲ್ಲ. ಬೇಸಿಗೆಯಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಸಲಾಗಿತ್ತು.
 
ಹೀಗೆ ಮೂರು ತರಹದ ನೀರು ಮಿಶ್ರಣ ಮಾಡಿ ಸೇವಿಸುತ್ತಿರುವ ನಮಗೆ ಯಾವ ನೀರಿನಿಂದ ತೊಂದರೆ ಆಗುತ್ತಿದೆ ಎನ್ನುವುದು ತಿಳಿಯುತ್ತಿಲ್ಲ. ಹುಡುಗರಿಗೆ ಕಾಣಿಸಿಕೊಳ್ಳುತ್ತಿರುವ ಕಾಯಿಲೆ ಕಂಡು ಹೆದರಿಕೆ ಆಗುತ್ತಿದೆ~ ಎಂದು ಪೀರವ್ವ ಅಜ್ಮೀರ, ಕಳಕೇಶ ರಾಠೋಡ ಮತ್ತಿತರರು ಆತಂಕ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT