ಬೆಂಗಳೂರು: ಸಾಹಿತಿಗಳಾದ ಚನ್ನವೀರ ಕಣವಿ, ಪ್ರೊ. ಹಂಪ ನಾಗರಾಜಯ್ಯ, ಪ್ರೊ.ಎಸ್.ಜಿ. ಸಿದ್ಧರಾಮಯ್ಯ ಮತ್ತಿತರರು ಕನ್ನಡದ ಉತ್ತಮ ಕತೆಗಳನ್ನು ಕಾಮಿಕ್ಸ್ ರೂಪದಲ್ಲಿ ಹೊರತರಲು ಚಿಂತಿಸಿದ್ದಾರೆ.
ಈ ಯೋಜನೆಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಅವರೂ ಸಾಥ್ ನೀಡಿದ್ದಾರೆ.
ಈ ಯೋಜನೆಯ ಕುರಿತು ಮಾತುಕತೆ ನಡೆಸಲು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರನ್ನು ಗೃಹ ಕಚೇರಿ `ಕೃಷ್ಣಾ~ದಲ್ಲಿ ಮಂಗಳವಾರ ಭೇಟಿ ಮಾಡಿದ ಡಾ. ಕಂಬಾರ, ಕಣವಿ, ಸಿದ್ಧರಾಮಯ್ಯ ಅವರು, ಯೋಜನೆಗೆ ಬೆಂಬಲ ನೀಡುವಂತೆ ಕೋರಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯುಕ್ತ ಮನು ಬಳಿಗಾರ್ ಅವರೂ ನಿಯೋಗದಲ್ಲಿದ್ದರು.
`ಈ ಯೋಜನೆಯಲ್ಲಿ ಕನ್ನಡದ ಉತ್ತಮ ಕತೆಗಳನ್ನು ತಲಾ 30 ಪುಟಗಳ ಕಾಮಿಕ್ಸ್ ರೂಪದಲ್ಲಿ ತರಲಾಗುವುದು. ಚಿತ್ರ, ಕತೆಗಳ ಮೂಲಕ ಮಕ್ಕಳಿಗೆ ನಾಡಿನ ಸಂಸ್ಕೃತಿಯನ್ನು ತಿಳಿಸುವ ಪ್ರಯತ್ನ ಇದು~ ಎಂದು ಡಾ. ಕಂಬಾರ ಅವರು `ಪ್ರಜಾವಾಣಿ~ಗೆ ತಿಳಿಸಿದರು.
ಯೋಜನೆಯ ಕುರಿತು ಆಸಕ್ತಿ ತೋರಿರುವ ಸದಾನಂದ ಗೌಡರು, ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಸಿ ಕಾಮಿಕ್ಸ್ ಪುಸ್ತಕಗಳನ್ನು ಸರ್ಕಾರವೇ ಖರೀದಿಸುವ ಭರವಸೆ ನೀಡಿದ್ದಾರೆ ಎಂದು ಅವರು ತಿಳಿಸಿದರು.