ಬೀದರ್: ಬಹಳಷ್ಟು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಾರಂಜಾ ಯೋಜನೆಯ ಎಲ್ಲ ಕಾಮಗಾರಿಗಳನ್ನು ಪೂರ್ಣಗೊಳಿಸಿ ಶೀಘ್ರದಲ್ಲಿಯೇ ಉದ್ಘಾಟನೆ ಮಾಡಲಾಗುತ್ತದೆ ಎಂದು ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ಗುರುವಾರ ಭರವಸೆ ನೀಡಿದರು.
ಹುಮನಾಬಾದ್ ತಾಲ್ಲೂಕಿನ ಅತಿವಾಳ ಗ್ರಾಮದಲ್ಲಿ `ಅತಿವಾಳ ಏತ ನೀರಾವರಿ ಯೋಜನೆ~ಯ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, `ಕಾರಂಜಾ ಯೋಜನೆಗೆ ಕಾಯಕಲ್ಪ ಕಲ್ಪಿಸುವ ಮೂಲಕ ಆ ಕುರಿತ ರಾಜಕೀಯ ಗುದ್ದಾಟಕ್ಕೆ ಕೊನೆ ಹಾಡೋಣ~ ಎಂದರು.
ಬಹಳಷ್ಟು ಸಂದರ್ಭಗಳಲ್ಲಿ ಕಾಮಗಾರಿ, ಯೋಜನೆ ಪೂರ್ಣಗೊಳ್ಳದಿದ್ದರೂ ಆಗಿದೆ ಎಂದು ಉದ್ಘಾಟನೆ, ಲೋಕಾರ್ಪಣೆ ಮಾಡಲಾಗುತ್ತದೆ. ಬಿಡುಕಾಲುವೆಗಳೂ ಸೇರಿದಂತೆ ಕನಿಷ್ಠ 70-80ರಷ್ಟು ಪ್ರತಿಶತ ಕೆಲಸ ಆದಾಗ ಮಾತ್ರ ಉದ್ಘಾಟಿಸಬೇಕು ಎನ್ನುವ ಕಾರಣಕ್ಕಾಗಿ ದೂರ ಹಾಕಲಾಗಿದೆ. ಹದಿನೈದು ದಿನದಲ್ಲಿ ಕಾರಂಜಾ ಯೋಜನೆ ಎಡ ಮತ್ತು ಬಲದಂಡೆ ಕಾಲುವೆಗಳಲ್ಲಿ ನೀರು ಹರಿಸಲು ಆರಂಭಿಸಲಾಗುತ್ತದೆ. ಆ ನಂತರ ಯೋಜನೆಯ ಉದ್ಘಾಟಿಸಲಾಗುತ್ತದೆ ಎಂದು ಹೇಳಿದರು.
ಕಾರಂಜಾ ಯೋಜನೆಯ ಬಲದಂಡೆ ಕಾಲುವೆಯಲ್ಲಿ ಎಲ್ಲ 131 ಕಿ.ಮೀ. ವರೆಗೆ ಪ್ರಾಯೋಗಿಕವಾಗಿ ನೀರು ಹರಿಸಿ ಯಶಸ್ವಿಯಾಗಿದ್ದೇವೆ. ಕಾಲುವೆ ವ್ಯವಸ್ಥೆಯ ರಿಪೇರಿಗಾಗಿ 63 ಕೋಟಿ ರೂಪಾಯಿಗಳ ಅಗತ್ಯವಿದೆ. ಅದನ್ನು ನೀಡಲು ಸಿದ್ಧರಿದ್ದೇವೆ. ಕಾಲುವೆ ಸಿದ್ಧವಾಗಿ ಬಹಳಷ್ಟು ದಿನಗಳಿಂದ ಉಪಯೋಗಿಸದೇ ಇರುವುದರಿಂದ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಅದನ್ನು ಸರಿ ಸ್ಥಿತಿ ತರಲಾಗುತ್ತದೆ ಎಂದು ಅವರು ಹೇಳಿದರು.
ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ರಾಜಕೀಯ ಪಕ್ಷಗಳು ಒಂದಾಗಿ ನಡೆದುಕೊಂಡು ಹೋಗುವ ಅಗತ್ಯವಿದೆ. ವಿರೋಧ ಪಕ್ಷಗಳ ಸಹಕಾರದಿಂದಲೇ ರಾಜ್ಯದ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವುದು ಸಾಧ್ಯವಾಗಿದೆ. ಆದರೂ ನೀರಾವರಿ ಯೋಜನೆಗಳಿಗೆ ಸಂಬಂಧಿಸಿದಂತೆ ಹೇಗೆ ನಡೆದುಕೊಳ್ಳಬೇಕು ಎನ್ನುವುದನ್ನು ಆಂಧ್ರ ಪ್ರದೇಶ ನೋಡಿ ಕಲಿಯಬೇಕು. ಒಂದೂ ಅಪಸ್ವರ ಕೇಳಿಸುವುದಿಲ್ಲ ಎಂದು ಹೇಳಿದರು.