ಬೆಂಗಳೂರು: ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ನಗರದ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ ಕರೆದೊಯ್ದ ಬಳಿಕ, ಬಳಲಿದಂತೆ ಕಂಡು ಬಂದಿದ್ದರಿಂದ ಕಾರಾಗೃಹದ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಯಿತು.
ನಗರದ ಸಿಟಿ ಸಿವಿಲ್ ಕೋರ್ಟ್ನ ಲೋಕಾಯುಕ್ತ ನ್ಯಾಯಾಲಯದಿಂದ ಬಿಗಿ ಪೊಲೀಸ್ ಬಂದೋಬಸ್ತ್ನಲ್ಲಿ ಸಂಜೆ 6 ಗಂಟೆ ಸುಮಾರಿಗೆ ಕಾರಾಗೃಹಕ್ಕೆ ಕರೆತಂದಾಗ ಅದಾಗಲೇ ಸಾರ್ವಜನಿಕರು ಹಾಗೂ ಯಡಿಯೂರಪ್ಪ ಬೆಂಬಲಿಗರು ಅಲ್ಲಿ ಸೇರಿದ್ದರು. ಅವರಿಗೆ 10462 ವಿಚಾರಣಾಧೀನ ಕೈದಿ ಸಂಖ್ಯೆಯನ್ನು ನೀಡಲಾಗಿದೆ. ಇದಕ್ಕೂ ಮುನ್ನ ಮಧ್ಯಾಹ್ನವೇ ಕಾರಾಗೃಹ ಸೇರಿದ ಶಾಸಕ ಎಸ್.ಎನ್.ಕೃಷ್ಣಯ್ಯ ಶೆಟ್ಟಿಗೆ 10461 ಸಂಖ್ಯೆಯನ್ನು ನೀಡಲಾಗಿದ್ದು, ಅವರಿಗೂ ಚಿಕಿತ್ಸೆ ನೀಡಲಾಯಿತು.
ಕಾರಾಗೃಹದ ನೆಲಮಹಡಿಯ ಡಿ ಬ್ಲಾಕ್ನಲ್ಲಿ, ಬಿಗಿ ಭದ್ರತೆ ಹೊಂದಿರುವ 20/14 ಅಳತೆಯ ಪ್ರತ್ಯೇಕ ಸೆಲ್ನಲ್ಲಿ ಯಡಿಯೂರಪ್ಪ ಅವರನ್ನು ಇರಿಸಲಾಗಿದೆ. ಇದರಲ್ಲಿ ಶೌಚಾಲಯ, ಸ್ನಾನಗೃಹ ಮತ್ತು ಟಿ.ವಿ. ವ್ಯವಸ್ಥೆ ಕಲ್ಪಿಸಲಾಗಿದೆ.
ಯಡಿಯೂರಪ್ಪ ಅವರನ್ನು ಕರೆದೊಯ್ದ ಬಳಿಕ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಬಿ.ಜೆ.ಪುಟ್ಟಸ್ವಾಮಿ, ಶಾಸಕರಾದ ಎಸ್.ಆರ್.ವಿಶ್ವನಾಥ್, ಬಿ.ಪಿ.ಹರೀಶ್, ಎಚ್. ಹಾಲಪ್ಪ, ನಂದೀಶ್ ರೆಡ್ಡಿ, ಡಿ.ಎನ್.ಜೀವರಾಜ್, ಚಂದ್ರಣ್ಣ, ಆಪ್ತ ಸಹಾಯಕ ಕಾ.ಪು.ಸಿದ್ಧಲಿಂಗಸ್ವಾಮಿ, ವಕೀಲ ಸಂದೀಪ ಪಾಟೀಲ್ ಮತ್ತಿತರರು ಅವರನ್ನು ಭೇಟಿ ಮಾಡಲು ಜೈಲಿಗೆ ತೆರಳಿದರು.