ನವಲಗುಂದ: ನರಗುಂದ ಕಡೆಯಿಂದ ಹುಬ್ಬಳ್ಳಿಗೆ ಮಾರುತಿ ಕಾರಿನಲ್ಲಿ ಯಾವುದೇ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ರೂ6.95 ಲಕ್ಷ ನಗದನ್ನು ಇಲ್ಲಿಯ ರೋಣ ಕ್ರಾಸ್ ಬಳಿ ಇರುವ ಚೆಕ್ ಪೋಸ್ಟ್ನಲ್ಲಿ ಗುರುವಾರ ಬೆಳಿಗ್ಗೆ ವಿಚಕ್ಷಣ ದಳದವರು ತಪಾಸಣೆ ನಡೆಸಿ ವಶಪಡಿಸಿಕೊಂಡಿದ್ದಾರೆ.
ಚುನಾವಣಾ ವಿಚಕ್ಷಣ ದಳದ ಅಧಿಕಾರಿ ಅಶೋಕ ಮುಗಳಿ ನೇತೃತ್ವದ ತಂಡ ನರಗುಂದ ಕಡೆಯಿಂದ ವೇಗವಾಗಿ ಆಗಮಿಸುತ್ತಿದ್ದ ಕಾರ್ನ್ನು ತಡೆದು ತಪಾಸಣೆ ನಡೆಸಿದಾಗ ರೂ 6.95 ಲಕ್ಷ ಹಣ ನಗದು ಪತ್ತೆಯಾಗಿದೆ. ಸೂಕ್ತ ದಾಖಲೆಗಳು ದೊರೆತಿಲ್ಲ.
ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಆರೋಪದ ಮೇರೆಗೆ ನಗದು ಹಾಗೂ ಮಾರುತಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಯಲ್ಲಪ್ಪ ಹಂಚಾಟೆ ಲೋಕಾಪುರದಿಂದ ಹುಬ್ಬಳ್ಳಿಗೆ ಈ ಹಣವನ್ನು ಸಾಗಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ವಿಚಕ್ಷಕಣ ದಳದ ಸಿಬ್ಬಂದಿ ಮೋಹನ ಪಾಟೀಲ, ಎಸ್.ಪಿ.ಬಿಡ್ನಾಳ, ಪಿಎಸ್ಐ ಎನ್.ಸಿ.ಕಾಡದೇವರ ಹಾಜರಿದ್ದರು. ನವಲಗುಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.