ಬೆಂಗಳೂರು: ಕೇಬಲ್ ಅಳವಡಿಸಲು ಹೊಂಡ ತೆಗೆಯುತ್ತಿದ್ದ ವೇಳೆ ಕಾರು ಡಿಕ್ಕಿ ಹೊಡೆದು ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದು, ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದೇವನಹಳ್ಳಿ ಸಮೀಪದ ಅಗಲಕೋಟೆ ಬಳಿ ಶುಕ್ರವಾರ ಬೆಳಿಗ್ಗೆ ನಡೆದಿದೆ.
ಬಾಗೇಪಲ್ಲಿಯ ಮೆಹಬೂಬ್ ಪಾಷಾ (45) ಮತ್ತು ಚನ್ನಗಿರಿಯ ತಿಮ್ಮಬೋವಿ (30) ಮೃತಪಟ್ಟ ಕಾರ್ಮಿಕರು. ಘಟನೆಯಲ್ಲಿ ತೀವ್ರ ಗಾಯಗೊಂಡಿರುವ ರಮೇಶ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಬೆಳಿಗ್ಗೆ 5.30ರ ಸುಮಾರಿಗೆ ಅಗಲಕೋಟೆ ಕ್ರಾಸ್ ಬಳಿ ಮೂವರು ಕಾರ್ಮಿಕರು ಕೇಬಲ್ ಅಳವಡಿಕೆಗೆ ಹೊಂಡ ತೆಗೆಯುತ್ತಿದ್ದರು. ಈ ವೇಳೆ ಬೂದಿಗೆರೆ ರಸ್ತೆಯಿಂದ ವಿಮಾನ ನಿಲ್ದಾಣದ ಕಡೆಗೆ ಬರುತ್ತಿದ್ದ ಕಾರು (ಕೆಎ 01 ಸಿ 4515) ಅವರಿಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ತೀವ್ರ ಗಾಯಗೊಂಡ ಇಬ್ಬರು ಕಾರ್ಮಿಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಚಾಲಕ ದಂಡಪಾಣಿ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ದೇವನಹಳ್ಳಿ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ. ಪ್ರಕರಣ ದಾಖಲಾಗಿದೆ.