ಬೆಂಗಳೂರು: ಕಾರು ಡಿಕ್ಕಿ ಹೊಡೆದು ಪಾದಾಚಾರಿಯೊಬ್ಬರು ಸಾವನ್ನಪ್ಪಿದ ಘಟನೆ ನಗರದ ಮೈಸೂರು ರಸ್ತೆಯ ಕೆಂಗೇರಿ ಚೆಕ್ಪೋಸ್ಟ್ ಬಳಿ ಶುಕ್ರವಾರ ರಾತ್ರಿ ನಡೆದಿದೆ.ಕೆಂಗೇರಿ ಬಳಿಯ ಮಾರುತಿನಗರ ನಿವಾಸಿ ವೆಂಕಟೇಶ್ (35) ಮೃತಪಟ್ಟವರು. ಅವರು ಸಿದ್ಧ ಉಡುಪು ಕಾರ್ಖಾನೆಯಲ್ಲಿ ಉದ್ಯೋಗಿಯಾಗಿದ್ದರು. ಅಂಗಡಿಗೆ ಬಂದಿದ್ದ ಅವರು ಮನೆಗೆ ವಾಪಸ್ ಹೋಗುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಂಗೇರಿ ಚೆಕ್ಪೋಸ್ಟ್ ಬಳಿ ಅವರು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕಾರು ಡಿಕ್ಕಿ ಹೊಡೆಯಿತು. ತೀವ್ರವಾಗಿ ಗಾಯಗೊಂಡ ಅವರು ಸ್ಥಳದಲ್ಲೇ ಸಾವನ್ನಪ್ಪಿದರು. ಬ್ಯಾಟರಾಯನಪುರ ಸಂಚಾರ ಪೊಲೀಸರು ಕಾರು ಚಾಲಕನನ್ನು ಬಂಧಿಸಿ ವಾಹನ ವಶಕ್ಕೆ ತೆಗೆದುಕೊಂಡಿದ್ದಾರೆ.
ನೀರಿನಲ್ಲಿ ಮುಳುಗಿ ಸಾವು
ಗಣೇಶ ಮೂರ್ತಿ ವಿಸರ್ಜನೆ ಮಾಡಲು ಹೋಗಿದ್ದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ವರ್ತೂರು ಕೆರೆಯಲ್ಲಿ ಶುಕ್ರವಾರ ರಾತ್ರಿ ನಡೆದಿದೆ.ವರ್ತೂರಿನ ಕುಂಬಾರ ರಸ್ತೆ ನಿವಾಸಿ ಗೋವಿಂದ (18) ಮೃತಪಟ್ಟ ಯುವಕ. ಆತ ಕೂಲಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕುಂಬಾರ ರಸ್ತೆಯಲ್ಲಿ ಇಟ್ಟಿದ್ದ ಗಣೇಶ ಮೂರ್ತಿಯನ್ನು ವಿಸರ್ಜನೆ ಮಾಡಲು ಆತ ಸ್ನೇಹಿತರೊಂದಿಗೆ ವರ್ತೂರು ಕೆರೆಗೆ ಹೋಗಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಅಗ್ನಿಶಾಮಕ ಸಿಬ್ಬಂದಿ ಶನಿವಾರ ಸಂಜೆ ಆತನ ಶವವನ್ನು ಕೆರೆಯಿಂದ ಹೊರ ತೆಗೆದರು. ವರ್ತೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಣ ಕಳವು
ಮಹಿಳೆಯನ್ನು ದುಷ್ಕರ್ಮಿಯೊಬ್ಬ ಬೈಕ್ನಲ್ಲಿ ಹಿಂಬಾಲಿಸಿ ಬಂದು 40 ಸಾವಿರ ನಗದು ಮತ್ತು ಮೊಬೈಲ್ಫೋನ್ ಕಿತ್ತುಕೊಂಡು ಪರಾರಿಯಾದ ಘಟನೆ ಬೇಗೂರು ರಸ್ತೆಯಲ್ಲಿ ಶುಕ್ರವಾರ ಸಂಜೆ ನಡೆದಿದೆ. ಈ ಸಂಬಂಧ ಬೇಗೂರು ನಿವಾಸಿ ತಸೀರಾ ಬಾನು ಎಂಬುವರು ದೂರು ಕೊಟ್ಟಿದ್ದಾರೆ.
ಅವರು ತಾವರೆಕೆರೆಯಲ್ಲಿರುವ ಸ್ನೇಹಿತರೊಬ್ಬರಿಂದ 40 ಸಾವಿರ ರೂಪಾಯಿ ಸಾಲ ಪಡೆದು ಆ ಹಣವನ್ನು ಬ್ಯಾಗ್ನಲ್ಲಿಟ್ಟುಕೊಂಡು ಅತ್ತೆ ರಾಜಮ್ಮ ಅವರ ಜತೆ ಮನೆಗೆ ಬರುತ್ತಿದ್ದಾಗ ದುಷ್ಕರ್ಮಿ ಈ ಕೃತ್ಯ ಎಸಗಿದ್ದಾನೆ.
ತಾವರೆಕೆರೆಯಿಂದ ಬಿಎಂಟಿಸಿ ಬಸ್ನಲ್ಲಿ ಬಂದ ತಸೀರಾ ಮತ್ತು ರಾಜಮ್ಮ ಅವರು ಬೇಗೂರು ಬಸ್ ನಿಲ್ದಾಣದಲ್ಲಿ ಇಳಿದು ಮನೆಗೆ ನಡೆದು ಹೋಗುತ್ತಿದ್ದರು. ಈ ಸಂದರ್ಭದಲ್ಲಿ ಅವರನ್ನು ಬೈಕ್ನಲ್ಲಿ ಹಿಂಬಾಲಿಸಿ ಬಂದ ಕಿಡಿಗೇಡಿ ಹಣ ಮತ್ತು ಮೊಬೈಲ್ ಫೋನ್ ಇದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾನೆ. ಎಲೆಕ್ಟ್ರಾನಿಕ್ಸಿಟಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.