ಕಾರ್ಕಳ: ಹೆಚ್ಚಿನ ವರದಕ್ಷಿಣೆ ತರಲು ಒತ್ತಡ ಹೇರಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ ಬಗ್ಗೆ ತಾಲ್ಲೂಕಿನ ಮುಂಡ್ಕೂರು ಗ್ರಾಮದ ಸಚ್ಚರಿಪೇಟೆಯ ಜರೀನಾ ಬಾನು ದೂರು ನೀಡಿದ್ದಾರೆ.
`ಉಡುಪಿ ತಾಲ್ಲೂಕು ಉಚ್ಚಿಲದ ಮುಳ್ಳುಗುಡ್ಡೆ ಇಂದಿರಾ ನಗರ ನಿವಾಸಿ ಅಬ್ದುಲ್ ರಜಾಕ್ ಜತೆ ಕಳೆದ ಸೆ.11ರಂದು ತಮ್ಮ ನಡೆದಿದ್ದು, ಈ ಸಂದರ್ಭದಲ್ಲಿ 2 ಲಕ್ಷ ರೂಪಾಯಿ ನಗದು ಹಾಗೂ 20 ಪವನ್ ಚಿನ್ನದ ಒಡವೆ ವರದಕ್ಷಿಣೆ ನೀಡಲಾಗಿತ್ತು. ಆದರೆ ನ. 30ರಂದು ಪತಿ ಅಬ್ದುಲ್ ರಜಾಕ್, ಇಬ್ರಾಹಿಂ ಮತ್ತು ಖತೀಜಾ ಸೇರಿ ಇನ್ನೂ 4 ಲಕ್ಷ ರೂಪಾಯಿ ತರಬೇಕೆಂದು ಒತ್ತಾಯಿಸಿ ತಮ್ಮನ್ನು ಸಚ್ಚರಿಪೇಟೆಯ ತವರಿಗೆ ಕಳುಹಿಸಿದ್ದಾರೆ. ಅವರಿಗೆ ಬುದ್ಧಿವಾದ ಹೇಳಲು ಹೋದ ತಂದೆಗೆ ಜೀವ ಬೆದರಿಕೆ ಒಡ್ಡಿದ್ದಾರೆ ಎಂದು ಜರೀನಾ ಬಾನು ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಇನ್ನೊಂದು ಪ್ರಕರಣ: ತಾಲ್ಲೂಕಿನ ಬೆಳ್ಮಣ್ ಗ್ರಾಮದ ಶಕುಂತಲಾ ಶೆಟ್ಟಿ ಎನ್ನುವವರೂ ವರದಕ್ಷಿಣೆ ಕಿರುಕುಳದ ಬಗ್ಗೆ ಗ್ರಾಮಾಂತರ ಠಾಣೆಗೆ ದೂರು ಸಲ್ಲಿಸಿದ್ದಾರೆ.
`ಸುಧಾಕರ ಶೆಟ್ಟಿ ಜತೆ 2005ರ ನ. 7ರಂದು ತಮ್ಮ ಮದುವೆ ನಡೆದಿದ್ದು, ಈ ಸಂದರ್ಭದಲ್ಲಿ 1.10 ಲಕ್ಷ ರೂಪಾಯಿ ನಗದು ಹಾಗೂ 8 ಪವನ್ ಚಿನ್ನದ ಒಡವೆ ವರದಕ್ಷಿಣೆಯಾಗಿ ನೀಡಲಾಗಿತ್ತು. ಈಗ ಗಂಡನ ಮನೆಯವರು ಹೆಚಿನ ವರದಕ್ಷಿಣೆ ತರಲು ಆಗ್ರಹಿಸಿ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಜೀವಬೆದರಿಕೆ ಒಡ್ಡುತ್ತಿದ್ದಾರೆ ಎಂದು ಶಕುಂತಳಾ ದೂರಿನಲ್ಲಿ ತಿಳಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದೆ.