ಬೆಂಗಳೂರು: ಏ ಮೇರೆ ವತನಕೆ ಲೋಗೊ, ಜರಾ ಆಂಖ ಮೆ ಭರಲೋ ಪಾನಿ....
ಜೋ ಶಹೀದ್ ಹುಯೆ ಹೈ ಉನಕಿ, ಜರಾ ಯಾದ್ ಕರೊ ಕುರುಬಾನಿ...
ಹಿಂದೆ ಮೆಲು ಸಂಗೀತ... ಕಣ್ಣು ಒದ್ದೆಯಾದ ಕ್ಷಣ.. ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
`ಆವಾಜ್ ಯೂತ್ ಫೋರಂ' ರಾಷ್ಟ್ರೀಯ ಸೈನಿಕ ಸ್ಮಾರಕದಲ್ಲಿ ಶನಿವಾರ `ಕಾರ್ಗಿಲ್ ವಿಜಯ ದಿನ'ದ ಅಂಗವಾಗಿ ಶ್ರದ್ಧಾಂಜಲಿ ಕಾರ್ಯಕ್ರಮವನ್ನು ಆಯೋಜಿಸಿತ್ತು.
ನಿವೃತ್ತ ಏರ್ ಕಮಾಂಡರ್ ಚಂದ್ರಶೇಖರ್ ಮಾತನಾಡಿ, `ಇಂದಿನ ಯುವಕರಿಗೆ ಸೈನ್ಯ, ಸೈನಿಕರ ಬಗೆಗೆ ಹೆಚ್ಚಿನದೇನೂ ತಿಳಿವಳಿಕೆಯೇ ಇಲ್ಲ. ಈ ಒಂದು ದಿನ ಸೈನಿಕರಿಗೆ ಶ್ರದ್ಧಾಂಜಲಿ ಸಲ್ಲಿಸಿದರೆ ನಮ್ಮ ಕರ್ತವ್ಯ ಮುಗಿಯಲಿಲ್ಲ. ತಮ್ಮ ಪ್ರಾಣವನ್ನು ತ್ಯಾಗ ಮಾಡಿ ದೇಶ ರಕ್ಷಿಸಿದ ಸೈನಿಕರ ಸದಾ ಸ್ಮರಣೆಯೇ ನಾವು ಅವರಿಗೆ ಸಲ್ಲಿಸುವ ಗೌರವವಾಗಿದೆ' ಎಂದರು.
`ಕಾರ್ಗಿಲ್, ದ್ರಾಸ್ ಪ್ರದೇಶಗಳಲ್ಲಿ 5,100 ಅಡಿ ಎತ್ತರದಲ್ಲಿ ನಮ್ಮ ಸೈನಿಕರು ದೇಶದ ಗಡಿಯನ್ನು ಹೇಗೆ ರಕ್ಷಿಸುತ್ತಾರೆ ಎಂಬ ಕಲ್ಪನೆಯೇ ನಮ್ಮ ದೇಶವಾಸಿಗಳಿಗೆ ಇಲ್ಲ. ಇದರಿಂದ, ಸೈನಿಕರ ತ್ಯಾಗ, ಬಲಿದಾನದ ಬಗ್ಗೆ ಯಾರೂ ಹೆಚ್ಚು ಗಮನ ಹರಿಸುವುದಿಲ್ಲ. ಯುವಕರು ದೇಶ, ಸೈನ್ಯ, ಸೈನಿಕರ ಬಗ್ಗೆ ತಿಳಿದುಕೊಳ್ಳಬೇಕು. ಆಗ ಮಾತ್ರ ಅವರ ಬಗ್ಗೆ ಹೆಮ್ಮೆ ಮೂಡಲು ಸಾಧ್ಯವಾಗುತ್ತದೆ' ಎಂದು ಹೇಳಿದರು.