ಕಂಪ್ಲಿ: ಇಲ್ಲಿಗೆ ಸಮೀಪದ ಮೆಟ್ರಿ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ ಕಾರ್ಮಿಕ ಕುಟುಂಬದ ಸದಸ್ಯರಿಗೆ ಆರೋಗ್ಯ ವಿಮೆ ಸೌಲಭ್ಯ ಒದಗಿಸುವ ಸಂಬಂಧ ಸ್ಮಾರ್ಟ್ ಕಾರ್ಡ್ಗಳನ್ನು ಶುಕ್ರವಾರ ವಿತರಿಸಲಾಯಿತು.
ಸ್ಮಾರ್ಟ್ ಕಾರ್ಡ್ಗಳನ್ನು ವಿತರಿಸಿದ ತಾ.ಪಂ ಅಧ್ಯಕ್ಷ ಸಿ.ಡಿ. ಮಹಾದೇವ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಜಂಟಿ ಸಹಯೋಗದಲ್ಲಿ ಉಚಿತ ಆರೋಗ್ಯ ವಿಮೆ ಸೌಲಭ್ಯ ಒದಗಿಸಲಾಗುತ್ತಿದ್ದು, ಫಲಾನುಭವಿ ಗಳು ಸದುಪಯೋಗ ಪಡೆಯುವಂತೆ ಮನವಿ ಮಾಡಿದರು.
ಇಲಾಖೆ ಕಾರ್ಮಿಕ ನಿರೀಕ್ಷಕ ಶೇಖರಗೌಡ ಪಾಟೀಲ್ ಮಾತನಾಡಿ, ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆ ಯಡಿ ಹೊಸಪೇಟೆ ತಾಲ್ಲೂಕಿನಲ್ಲಿ 28,537 ಫಲಾನುಭವಿಗಳನ್ನು ಗುರುತಿಸಲಾಗಿದೆ ಎಂದು ತಿಳಿಸಿದರು.
ಕಾರ್ಮಿಕ ಕುಟುಂಬಗಳು ರೂ. 30 ನೋಂದಣಿ ಶುಲ್ಕ ಪಾವತಿಸಿ ಸ್ಮಾರ್ಟ್ ಕಾರ್ಡ್ ಪಡೆದಲ್ಲಿ ವರ್ಷಕ್ಕೆ ರೂ. 30ಸಾವಿರದವರೆಗೆ ಚಿಕಿತ್ಸಾ ವೆಚ್ಚವನ್ನು ನಿಗದಿತ ಆಸ್ಪತ್ರೆಗಳಲ್ಲಿ ಒಳರೋಗಿಯಾಗಿ ಉಚಿತವಾಗಿ ನಗದು ನೀಡದೆ ಪಡೆಯಬಹುದು ಎಂದು ವಿವರಿಸಿದರು.
ಪ್ರಸ್ತುತ ವಿಮಾ ಯೋಜನೆಯಡಿ ಶಸ್ತ್ರ ಚಿಕಿತ್ಸೆ ಸೇರಿದಂತೆ 1,085ಕ್ಕೂ ಹೆಚ್ಚು ಚಿಕಿತ್ಸಾ ಕ್ರಮಗಳಿಗೆ ನೋಂದಾಯಿತ ಆಸ್ಪತ್ರೆಗಳಲ್ಲಿ ಒಳ ರೋಗಿಯಾಗಿ ಯಾವುದೇ ವೆಚ್ಚವಿಲ್ಲದೆ ಪಡೆಯಬಹುದು ಎಂದು ತಿಳಿಸಿದರು.