ತಮಿಳುನಾಡಿನ ಕಮ್ಯುನಿಸ್ಟ್ ನಾಯಕಿ ಪಾರ್ವತಿ ಕೃಷ್ಣನ್ ಮೂರು ಸಲ ಲೋಕಸಭೆಗೆ, ಒಂದು ಸಲ ರಾಜ್ಯ ಸಭೆಗೆ ಆಯ್ಕೆಯಾಗಿದ್ದರು. 1919 ರಲ್ಲಿ ಜನಿಸಿದ 94 ವರ್ಷ ಬದುಕಿದ್ದ ಅವರು ಕೇರಳದಲ್ಲಿ ಕಾರ್ಮಿಕ ಚಳವಳಿಯ ನೇತೃತ್ವ ವಹಿಸಿದ್ದರು.
ಆಕ್ಸ್ಫರ್ಡ್ನಲ್ಲಿ ಬಿ.ಎ ಆನರ್ಸ್ ನಂತರ ಸಿಪಿಐ ಸೇರಿದರು. 1950ರ ಸುಮಾರಿಗೆ ಪಾರ್ವತಿ ಕೃಷ್ಣನ್ ಮತ್ತು ಅವರ ಪತಿ ಎನ್.ಕೃಷ್ಣನ್ ಕೊಯಮತ್ತೂರಿನ ವಾಳ್ಪರೆ ಭಾಗದ ಜವಳಿ ಮಿಲ್ ಮತ್ತು ಚಹಾ ತೋಟಗಳ ಕಾರ್ಮಿಕರ ಮಧ್ಯೆ ಕೆಲಸ ಮಾಡಿ ಅವರ ಹಕ್ಕುಗಳಿಗಾಗಿ ಹೋರಾಡಿದರು.
ಅಲ್ಲಿನ ಮಿಲ್ ಕೆಲಸಗಾರರ ಸಂಬಳ ಕುರಿತು ಇವರು ನಡೆಸಿದ ಹೋರಾಟ ಇಂದಿಗೂ ಗಮನಾರ್ಹ.ಲಂಡನ್ನಲ್ಲಿ ಉನ್ನತ ಅಧ್ಯಯನ ನಡೆಸಿದರು. ಸಾಕಷ್ಟು ಶ್ರೀಮಂತ ಕುಟುಂಬದಿಂದ ಬಂದ ಪಾರ್ವತಿ ಅವರು 80 ವರ್ಷ ತುಂಬುವವರೆಗೂ ಬಸ್ನಲ್ಲೇ ಪ್ರಯಾಣ ಮಾಡುತ್ತಿದ್ದರು.
ಪಾರ್ವತಿ ತುಂಬಾ ಓದುವ ಹವ್ಯಾಸ ಹೊಂದಿದ್ದರು. ಅವರ ಮನೆ ಎಲ್ಲಾ ರೀತಿಯ ಜನರಿಗೆ ಸದಾ ತೆರೆದಿರುತ್ತಿತ್ತು. ಇವರ ಸಹೋದರ ಮೋಹನ ಕುಮಾರ ಮಂಗಳಂ, ಇಂದಿರಾ ಗಾಂಧಿ ಸಂಪುಟದಲ್ಲಿ ಮಂತ್ರಿಯಾಗಿದ್ದರು. ಇವರು ರಾಜಕೀಯಕ್ಕೆ ಬಂದಾಗ ಇವರ ಕುಟುಂಬದವರು ಹೊಂದಿದ್ದ 5,000 ಎಕರೆ ಭೂಮಿಯನ್ನು ಭೂರಹಿತರಿಗೆ ಹಂಚಲಾಯಿತು.