ಕೆಜಿಎಫ್: ಗಣಿ ಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಗರದಲ್ಲಿ ಉತ್ತಮ ವಿದ್ಯಾಕೇಂದ್ರಗಳನ್ನು ಸ್ಥಾಪಿಸಿರುವುದು ಅತ್ಯಂತ ಶ್ಲಾಘನೀಯ ಎಂದು ರಾಷ್ಟ್ರೀಯ ಶಿಲಾ ತಂತ್ರಜ್ಞಾನ ಸಂಸ್ಥೆ ಹಿರಿಯ ವಿಜ್ಞಾನಿ ಡಾ.ಶ್ರೀನಿವಾಸ್ ಅಭಿಪ್ರಾಯಪಟ್ಟರು.
ನಗರದ ಡಾ.ಟಿ.ತಿಮ್ಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಗುರುವಾರ ಡಾ.ಟಿ.ತಿಮ್ಮಯ್ಯ ಸ್ವಾತಂತ್ರ್ಯ ಹೋರಾಟಗಾರರ ದತ್ತಿ ನಿಧಿಯಿಂದ ಎಂಜಿನಿಯರಿಂಗ್, ಕಾನೂನು, ಪಿಯುಸಿ, ಪದವಿ ಕಾಲೇಜುಗಳ 62 ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಿ ಮಾತನಾಡಿದ ಅವರು, ವಿದ್ಯಾ ಕೇಂದ್ರಗಳ ಸ್ಥಾಪನೆಯಿಂದ ಗಣಿ ಕಾರ್ಮಿಕರ ಮಕ್ಕಳು ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಅನುಕೂಲವಾಗಿದೆ. ಇದರಿಂದ ಅವರ ಬದುಕು ಸುಧಾರಣೆಯಾಗಲು ಸಾಧ್ಯ ಎಂದು ತಿಳಿಸಿದರು.
ಅಮೆರಿಕದ ಶ್ವೇತಭವನದ ಹಿರಿಯ ಪೊಲೀಸ್ ಅಧಿಕಾರಿ ಸೆಲ್ವನಾಯಗಂ, ವಿಶ್ವಸಂಸ್ಥೆ ಹಿರಿಯ ಅಧಿಕಾರಿ ಸುಂದರಮೂರ್ತಿ ಮುಂತಾದ ಹಲವು ಗಣ್ಯರು ಕೆಜಿಎಫ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಓದಿ ಭವಿಷ್ಯವನ್ನು ರೂಪಿಸಿಕೊಂಡಿದ್ದಾರೆ ಎಂದು ಸ್ಮರಿಸಿದರು.
ಸಂಸ್ಥೆಯ ಡಾ.ಟಿ.ತಿಮ್ಮಯ್ಯ ಮಾತನಾಡಿ, ಪ್ರತಿವರ್ಷ ದತ್ತಿನಿಧಿಯಿಂದ ರೂ. 25 ಲಕ್ಷ ಮೌಲ್ಯದ ವಿದ್ಯಾರ್ಥಿ ವೇತನವನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗುತ್ತಿದೆ ಎಂದು ಹೇಳಿದರು.ಸಂಸ್ಥೆ ಕಾರ್ಯದರ್ಶಿ ಎಂ.ಭಕ್ತವತ್ಸಲಂ, ಟ್ರಸ್ಟ್ ಸದಸ್ಯ ವೆಂಕಟಕೃಷ್ಣರೆಡ್ಡಿ ಮಾತನಾಡಿದರು.
ಟ್ರಸ್ಟ್ ಸದಸ್ಯರಾದ ನಂಜಪ್ಪ, ನಾರಾಯಣರೆಡ್ಡಿ, ಮಣಿವಣ್ಣನ್, ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಮುನಿಕೃಷ್ಣಪ್ಪ, ಪಿಯು ಕಾಲೇಜು ಪ್ರಾಂಶುಪಾಲ ನಾರಾಯಣಸ್ವಾಮಿ, ಕಾನೂನು ಕಾಲೇಜು ಪ್ರಾಂಶುಪಾಲ ನಾಗರಾಜ್ ಹಾಜರಿದ್ದರು. ಡಾ.ಸೈಯದ್ ಆರೀಫ್ ಸ್ವಾಗತಿಸಿದರು. ಸುಧಾ, ಜ್ಯೋತಿ ನಿರೂಪಿಸಿದರು.