ಬೆಂಗಳೂರು: ರಾಜ್ಯದ ಭೂಹಗರಣಗಳ ಕುರಿತು ತನಿಖೆ ನಡೆಸಲು ನೇಮಕವಾಗಿರುವ ನ್ಯಾ. ಪದ್ಮರಾಜ ಆಯೋಗವು ಸಂಬಂಧಪಟ್ಟ ಇಲಾಖೆಗಳಿಂದ ದೂರು ಮತ್ತು ಪ್ರತಿಕ್ರಿಯೆ ಪಡೆಯುವ ಕಾರ್ಯವನ್ನು ಮುಂದುವರೆಸಲಿದೆ.
‘ಸಾಕ್ಷಿಗಳ ದಾಖಲೀಕರಣ ಮತ್ತು ಮಧ್ಯಂತರ ಆದೇಶ ನೀಡದಂತೆ ಆಯೋಗದ ಮೇಲೆ ನಿರ್ಬಂಧ ಹೇರಲಾಗಿದೆ. ಇವೆರಡನ್ನು ಹೊರತುಪಡಿಸಿ ಬೇರೇ ಯಾವುದೇ ನಿರ್ಬಂಧ ಇಲ್ಲ’ ಎಂದು ಆಯೋಗದ ಕಾರ್ಯದರ್ಶಿ ಶ್ರೀವತ್ಸ ಕೆದಿಲಾಯ ಅವರು ಮಂಗಳವಾರ ಇಲ್ಲಿ ತಿಳಿಸಿದರು.
1995ರ ನಂತರ ಮಂಜೂರಾಗಿರುವ ಭೂಮಿಯ ಕುರಿತು ವಿವರ ನೀಡುವಂತೆ ಬಿಡಿಎ, ರಾಜ್ಯ ಗೃಹ ಮಂಡಳಿ ಮತ್ತು ಕೆಐಎಡಿಬಿಗೆ ಪದ್ಮರಾಜ ಆಯೋಗ ನೋಟಿಸ್ ಜಾರಿ ಮಾಡಿತ್ತು.
‘ಜಾರಿ ಮಾಡಿರುವ ನೋಟಿಸ್ಗಳಿಗೆ ಪ್ರತಿಕ್ರಿಯೆ ಪಡೆದುಕೊಳ್ಳುವ ಅಧಿಕಾರ ಆಯೋಗಕ್ಕೆ ಇದೆ. ಕೆಲವರು ಆಯೋಗಕ್ಕೆ ದೂರನ್ನೂ ನೀಡಿದ್ದಾರೆ. ದೂರು ದಾಖಲಿಸಿಕೊಳ್ಳುವುದಕ್ಕೆ ಯಾವುದೇ ನಿರ್ಬಂಧ ಇಲ್ಲ’ ಎಂದು ಅವರು ಸ್ಪಷ್ಟಪಡಿಸಿದರು.