ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕರ್ತರಿಂದ ಮುಜುಗರ ವರದಿ: ಆಕ್ರೋಶ

Last Updated 3 ಅಕ್ಟೋಬರ್ 2012, 5:25 IST
ಅಕ್ಷರ ಗಾತ್ರ

ರಾಯಚೂರು: `ಆರ್‌ಟಿಪಿಎಸ್ ಎದುರು ಮಂಗಳವಾರ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದರು ಎಂಬುದು ನನ್ನ ಗಮನಕ್ಕೆ ಇರಲಿಲ್ಲ. ದೇರ್ ಇಸ್ ಸಮ್ ಕಮ್ಯೂನಿಕೇಶನ್ ಗ್ಯಾಪ್. ಕೃಷ್ಣಾ ನದಿ ಪಂಪ್‌ಹೌಸ್ ಗೆ ಹೋಗಿ ಬರುವಾಗ ಅಲ್ಲಿ ಪ್ರತಿಭಟನೆ ಮಾಡುತ್ತಿರುವುದನ್ನು ಕಂಡು ಅಲ್ಲಿದ್ದ ಜನರ ಸಮಸ್ಯೆ ಕೇಳಿ ಆರ್‌ಟಿಪಿಎಸ್ ಅಧಿಕಾರಿ ಭೇಟಿ ಮಾಡಿ ರಾಯಚೂರಿನ ಕಾರ್ಯಕ್ರಮಕ್ಕೆ ಬಂದೆ~  ಪತ್ರಿಕೆಯಲ್ಲಿ ಮುಜುಗರದಿಂದ ವಾಪಸ್ ಬಂದೆ ಎಂದು ಬರೆದಿರುವುದು ಸುಳ್ಳು~

ಇದು ರಾಯಚೂರು ನಗರ ವಿಧಾನಸಭಾ ಕ್ಷೇತ್ರ ಶಾಸಕ ಸಯ್ಯದ್ ಯಾಸಿನ್ ಅವರು ಮಂಗಳವಾರ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಕಚೇರಿ ಆವರಣದಲ್ಲಿ ನಡೆದ `ಕಾಂಗ್ರೆಸ್‌ಗೆ ಬನ್ನಿ ಬದಲಾವಣೆ ತನ್ನಿ~ ಕಾರ್ಯಕ್ರಮದಲ್ಲಿ ತಮ್ಮ ಧೋರಣೆಯನ್ನು ಸಮರ್ಥಿಸಿಕೊಂಡ ಪರಿ.

ಸೋಮವಾರ ಆರ್‌ಟಿಪಿಎಸ್ ಎದುರು ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಲು ಸಿದ್ಧತೆಯಲ್ಲಿದ್ದರು. ಬೇರೆ ಊರುಗಳಿಂದ ಜನತೆ ಬರುವವರಿದ್ದರು. ಅಷ್ಟು ಹೊತ್ತಿಗೆ ಅಲ್ಲಿಗೆ ಧಾವಿಸಿದ ಸಯ್ಯದ್ ಯಾಸಿನ್ ಅವರು ಆರ್‌ಟಿಪಿಎಸ್ ಕಾರ್ಯನಿರ್ವಾಹಕ ನಿರ್ದೇಶಕರನ್ನು ಕರೆತಂದು ಭೇಟಿ ಮಾಡಿಸುವ ಪ್ರಯತ್ನ ಮಾಡಿದಾಗ ಯುವ ಕಾಂಗ್ರೆಸ್ ಕಾರ್ಯಕರ್ತರು, ಅಲ್ಲಿದ್ದ ಜನ ವಿರೋಧ ವ್ಯಕ್ತಪಡಿಸಿದ್ದರು. ಪ್ರತಿಭಟನೆ ನಡೆಸುವುದಾಗಿ ಕಾರ್ಯಕರ್ತರು ಹೇಳಿದ್ದರಿಂದ ಶಾಸಕರು ಮುಜುಗರಗೊಂಡು ರಾಯಚೂರಿಗೆ ನಿರ್ಗಮಿಸಿದ್ದರು.

ಈ ಬಗ್ಗೆ `ಪ್ರಜಾವಾಣಿ~ ಮಂಗಳವಾರದ ಪತ್ರಿಕೆಯಲ್ಲಿ ವರದಿ ಪ್ರಕಟಿಸಿತ್ತು. ಈ ವರದಿಗೆ ಆಕ್ರೋಶಗೊಂಡ ಶಾಸಕ ಯಾಸಿನ್ ವೇದಿಕೆಯಲ್ಲಿ ಪತ್ರಿಕೆ ಹಿಡಿದು ಅಸಮಾಧಾನ ಹೊರಹಾಕಿದರು. `ಕಂಡದ್ದು ಬರೆದರೆ ಕೆಂಡದಂಥಾ ಕೋಪ ಎಂಬ ಮಾತು ಸತ್ಯ ಮಾಡಿದರು~ ಎಂದು ಕಾರ್ಯಕರ್ತರೇ ಬಳಿಕ ತಿಳಿಸಿದರು.

ಆರ್‌ಟಿಪಿಎಸ್ ಎದುರು ಯಾಸಿನ್ ಪಕ್ಷದ ಯುವ ಕಾರ್ಯಕರ್ತರಿಂದ ಮುಜುಗರ ಅನುಭವಿಸಿದ್ದು ಇತರೆ ಪತ್ರಿಕೆಗಳಲ್ಲೂ ಪ್ರಕಟಗೊಂಡಿದ್ದರೂ ಶಾಸಕರು ಕೇವಲ ಪ್ರಜಾವಾಣಿ ವರದಿಗೆ ಆಕ್ರೋಶ ಹೊರ ಹಾಕಿದ್ದಾರೆ ಎಂದು ಸಾರ್ವಜನಿಕರೊಬ್ಬರು ಹೇಳಿದರು.

`ಯುವ ಕಾಂಗ್ರೆಸ್ ಕಾರ್ಯಕರ್ತರು ಅಂದರೆ ಯಾರು? ಯಾರಿಗೆ ಹೇಳಿ, ಯಾರನ್ನು ಕೇಳಿ ಅವರು ಆರ್‌ಟಿಪಿಎಸ್ ಮುಂದೆ ಪ್ರತಿಭಟನೆ ಹಮ್ಮಿಕೊಂಡರು~ ಎಂದು ಪ್ರಶ್ನಿಸಿದರಲ್ಲದೆ, ಐ ಆ್ಯಮ್ ಎಂಎಲ್‌ಎ. ಆದ್ರೂ ನಾನು ಯಾಪಲದಿನ್ನಿಗೆ ಹೋಗಬೇಕಾದ್ರೂ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಿಗೆ ಹೇಳಿ ಹೋಗುತ್ತೇನೆ. ನನಗೆ ಶಿಸ್ತಿದೆ~ ಎಂದು ಹೇಳಿದರು.

ವಿದ್ಯುತ್‌ನಂಥ ಗಂಭೀರ ಸಮಸ್ಯೆ ಪರಿಹಾರಕ್ಕೆ ತಮ್ಮದೇ ಪಕ್ಷದ ಯುವ ಘಟಕದ ಕಾರ್ಯಕರ್ತರು, ಬೇರೆ ಕ್ಷೇತ್ರದ ಶಾಸಕರು, ಮುಖಂಡರು ಜಿಲ್ಲೆಯ ವಿವಿಧ ಭಾಗಗಳಿಂದ ಆರ್‌ಟಿಪಿಎಸ್ ಎದುರು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ, ರಾಯಚೂರಿನ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಲ್ಲಿಂದ ಬರಬೇಕಾಯ್ತು ಎಂದು ಕಾಂಗ್ರೆಸ್ ಸಮಾರಂಭದಲ್ಲಿ ಶಾಸಕ ಯಾಸೀನ್ ಅವರು ಸಮರ್ಥಿಸಿಕೊಂಡಿದ್ದಾರೆ. ಜನತೆ ಎದುರಿಸುವ ವಿದ್ಯುತ್ ಸಮಸ್ಯೆಗೆ ಪರಿಹಾರಕ್ಕೆ ಪಕ್ಷದ ಯುವ ಘಟಕ ಏರ್ಪಡಿಸಿದ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ಮುಖ್ಯವೋ? ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದೇ ಮುಖ್ಯವೋ? ಎಂಬ ಪ್ರಶ್ನೆ ಸಾರ್ವಜನಿಕರಿಂದ ಕೇಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT