ನವದೆಹಲಿ (ಐಎಎನ್ಎಸ್): ಮೂರು ದಿನಗಳ ಹಿಂದೆ ದೆಹಲಿ ಮೆಟ್ರೊ ರೈಲಿನ ಬಾಗಿಲಿನಲ್ಲಿ ಪ್ರಯಾಣಿಕರೊಬ್ಬರ ಕಾಲು ಸಿಲುಕಿ ಸಂಭವಿಸಿದ ಅವಘಡ `ಅಸಹಜ ಅಪಘಾತ~ ಎಂದು ದೆಹಲಿ ಮೆಟ್ರೊ ರೈಲ್ವೆ ಕಾರ್ಪೋರೇಷನ್ (ಡಿಎಂಆರ್ಸಿ) ಸ್ಪಷ್ಟಪಡಿಸಿದೆ.
ಮಂಗಳವಾರ ದ್ವಾರಕಾ ಸೆಕ್ಟರ್ 21 ಹಾಗೂ ನೊಯಿಡಾ ಸಿಟಿ ಸೆಂಟರ್ ಮಾರ್ಗ ಮಧ್ಯೆ ಪ್ರಯಾಣಿಸುತ್ತಿದ್ದ ಮೆಟ್ರೊ ರೈಲಿನಲ್ಲಿ ಪ್ರಯಾಣಿಕರೊಬ್ಬರ ಕಾಲು ಸಿಕ್ಕಿ ಹಾಕಿಕೊಂಡಿತ್ತು. ಸುದೈವವಶಾತ್ ಅವರು ಯಾವುದೇ ಅಪಾಯವಿಲ್ಲದೆ ಪಾರಾಗಿದ್ದರು. ಈ ಕುರಿತಂತೆ ಶುಕ್ರವಾರ ವಿವರ ನೀಡಿರುವ ಡಿಎಂಆರ್ಸಿ ರೈಲಿನ ಬಾಗಿಲಿನಲ್ಲಿ ಯಾವುದೇ ದೋಷವಿರಲಿಲ್ಲ ಎಂದು ಹೇಳಿದ್ದಾರೆ.
ಸುನ್ನಿ ಕುಮಾರ್ ಎಂಬುವವರು ಜನಕಪುರಿ (ಪಶ್ಚಿಮ) ನಿಲ್ದಾಣದಲ್ಲಿ ತಮ್ಮ ಕಾಲನ್ನು ಹೊರಗೆ ಎಳೆದುಕೊಳ್ಳಬೇಕೆನ್ನುವಷ್ಟರಲ್ಲೇ ಬಾಗಿಲು ಮುಚ್ಚಿಕೊಂಡಿತ್ತು. ಮುಂದಿನ ನಿಲ್ದಾಣ ಬಂದಾಗಲೇ ಅವರಿಗೆ ತಮ್ಮ ಕಾಲನ್ನು ಬಾಗಿಲಿನ ಮಧ್ಯದಿಂದ ಹೊರತೆಗೆದುಕೊಳ್ಳಲು ಸಾಧ್ಯವಾಯಿತು. ಇದು ಮೂರು ನಿಮಿಷದ ಪ್ರಯಾಣವಾಗಿತ್ತು.