ಚಂಡೀಗಡ (ಐಎಎನ್ಎಸ್): ನೀರಾವರಿ ಕಾಲುವೆ ಮೇಲಿನ ಸ್ಥಳಾವಕಾಶದಲ್ಲಿ ಸೌರ ವಿದ್ಯುತ್ ಉತ್ಪಾದನೆಗೆ ಅನುಕೂಲವಾಗುವಂಥ ಯೋಜನೆ ಅಳವಡಿಸಲು ಪಂಜಾಬ್ ಸರ್ಕಾರ ಅನುಮತಿ ನೀಡಿದೆ. ಇದರಿಂದ ದೇಶದಲ್ಲೇ ಇಂತಹ ಸಾಹಸಕ್ಕೆ ಹೆಜ್ಜೆ ಇಟ್ಟ ಮೊದಲ ರಾಜ್ಯ ಇದಾಗಿದೆ.
ಈ ಯೋಜನೆಯಿಂದ, ನೀರಾವರಿ ಕಾಲುವೆಯಿಂದ ನೀರು ಆವಿಯಾಗುವ ಪ್ರಮಾಣದಲ್ಲೂ ಇಳಿಕೆ ಕಂಡು ಬರುವ ಸಾಧ್ಯತೆ ಇದೆ ಎಂದು ನಿರೀಕ್ಷಿಸಲಾಗಿದೆ. ಬುಧವಾರ ಮುಖ್ಯಮಂತ್ರಿ ಪ್ರಕಾಶ್ಸಿಂಗ್ ಬಾದಲ್ ಯೋಜನೆಗೆ ಸಮ್ಮತಿಯ ಮುದ್ರೆ ಒತ್ತಿದ್ದಾರೆ.
ಆರಂಭಿಕ ಹಂತದಲ್ಲಿ ಒಂದು ಮೆಗಾವಾಟ್ ಸಾಮರ್ಥ್ಯದ ಸೌರ ಶಕ್ತಿ ಉತ್ಪಾದನೆಗೆ ಅನುಮತಿ ನೀಡಲಾಗಿದೆ. ಯೋಜನೆಯಿಂದ ಒಂದು ವರ್ಷದ ಅವಧಿಯಲ್ಲಿ 5 ದಶಲಕ್ಷ ಗ್ಯಾಲನ್ನಷ್ಟು ನೀರು ಆವಿಯಾಗುವುದನ್ನು ತಡೆಗಟ್ಟಬಹುದು ಎಂಬ ಭರವಸೆ ಇದೆ.
ನೀರಾವರಿ ಕಾಲುವೆಗಳ ಮೇಲಿನ ಸ್ಥಳಾವಕಾಶವನ್ನು ಬಳಸುವುದರಿಂದ ಭೂ ಪ್ರದೇಶದ ಉಳಿತಾಯವಾದಂತೆ ಆಗುತ್ತದೆ ಎಂದು ಅಧಿಕಾರಿಗಳು ವಿವರಿಸಿದ್ದಾರೆ.