ಕಂಪ್ಲಿ: ಈ ಭಾಗದ ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ನೀರು ಸ್ಥಗಿತಗೊಳಿಸಿರುವುದನ್ನು ವಿರೋಧಿಸಿದ ರೈತರು ಕೂಡಲೇ ಕಾಲುವೆಗೆ 450ಕ್ಯೂಸೆಕ್ ನೀರು ಹರಿಸುವಂತೆ ಆಗ್ರಹಿಸಿದರು.
ಪಟ್ಟಣದ ಅತಿಥಿ ಗೃಹದಲ್ಲಿ ಬುಧವಾರ ಜರುಗಿದ ರೈತರ ಸಭೆಯಲ್ಲಿ ಮಾತನಾಡಿದ ರೈತ ಮುಖಂಡರು, ನೀರು ಬಿಡುಗಡೆ ಮಾಡದಿದ್ದಲ್ಲಿ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು.
ನೀರಾವರಿ ಸಲಹಾ ಸಮಿತಿ ತೀರ್ಮಾನದಂತೆ ಡಿ.1 ರಿಂದ ಡಿ. 15ರತನಕ ನೀರು ನಿಲುಗಡೆ ಮಾಡಿ, ಡಿ. 16ರಿಂದ 280 ಕ್ಯೂಸೆಕ್ ನೀರು ಹರಿಸಬೇಕಿತ್ತು. ಆದರೆ ನೀರಾವರಿ ಇಲಾಖೆ ಹಿರಿಯ ಅಧಿಕಾರಿಗಳು ಏಕಾಏಕಿ ಡಿ.31ರವರೆಗೆ ನೀರು ನಿಲುಗಡೆ ಮಾಡುವುದಾಗಿ ಮಾಧ್ಯಮಗಳಲ್ಲಿ ಪ್ರಕಟಿಸಿದ್ದನ್ನು ತೀವ್ರವಾಗಿ ಖಂಡಿಸಿದರು.
ಡಿ.16ರಿಂದ ನೀರು ಹರಿಸದಿದ್ದಲ್ಲಿ ಹಿಂಗಾರು ಭತ್ತದ ಸಸಿ ಮಡಿಗಳಿಗೆ ನೀರು ದೊರಕದೆ ನಾಶವಾಗುತ್ತವೆ ಎಂದರು.
ರೈತ ಮುಖಂಡರಾದ ಎಲ್. ರಾಮನಾಯ್ಡು, ಕೇಶವರೆಡ್ಡಿ, ಕರಿಬಸವನಗೌಡ, ಜಿ. ಪ್ರತಾಪ್ ರೆಡ್ಡಿ, ಎಚ್. ವೀರಶೇಖರಗೌಡ, ಕೋಗಂಟಿ ಸುಬ್ಬರಾಯ್ಡು, ಪೆದ್ದಾ ಪುಲ್ಲಾರೆಡ್ಡಿ, ಸತ್ಯನಾರಾಯಣ, ಒಬಳೇಶ್, ಪೂರ್ಣಚಂದ್ರರಾವ್ ಸೇರಿ ಅನೇಕರು ಪಾಲ್ಗೊಂಡಿದ್ದರು.