ಘಟಪ್ರಭಾ (ಗೋಕಾಕ): ತನ್ನ ಪತ್ನಿ- ಮಕ್ಕಳನ್ನು ನೋಡಿಕೊಂಡು ಬರಲು ಪತ್ನಿಯ ತವರು ಮನೆಗೆ ತೆರಳುತ್ತಿದ್ದ ವ್ಯಕ್ತಿ, ವಾಹನ ಚಾಲನೆಯ ನಿಯಂತ್ರಣ ಕಳೆದುಕೊಂಡ ಪರಿಣಾಮ ತುಂಬಿ ಹರಿಯುತ್ತಿದ್ದ ಘಟಪ್ರಭೆಯ ಎಡದಂಡೆ ಕಾಲುವೆಗೆ ಉರುಳಿ ಮರಣಕ್ಕಿಡಾದ ಘಟನೆ ಇಲ್ಲಿಗೆ ಸಮೀಪದ ಬಡಿಗವಾಡ ರಸ್ತೆಯ ಪಾಮಲದಿನ್ನಿ ಗ್ರಾಮ ಹೊರವಲಯದಲ್ಲಿ ಗುರುವಾರ ಸಂಭವಿಸಿದೆ.
ಮೃತನನ್ನು ಗೋಕಾಕ ನಗರದ ಕುಂಬಾರ ಓಣಿ ನಿವಾಸಿ ಬಸವರಾಜ ಘಮಾಣಿ (28) ಎಂದು ಗುರುತಿಸಲಾಗಿದೆ. ಈತನು ತನ್ನ ಹೆಂಡತಿ ಹಾಗೂ ಮಕ್ಕಳನ್ನು ಭೇಟಿಯಾಗಲು ಇಂಡಿಕಾ ಕಾರಿನಲ್ಲಿ ಬುಧವಾರ ರಾತ್ರಿ ಇಲ್ಲಿಂದ ತುಕ್ಕಾನಟ್ಟಿ ಗ್ರಾಮಕ್ಕೆ ತೆರಳು ವಾಗ ಮಾರ್ಗ ಮಧ್ಯೆ ಬಡಿಗವಾಡ ಬಳಿ ಈ ಅವಘಡ ಸಂಭವಿಸಿದೆ ಎನ್ನಲಾಗಿದೆ.
ಗುರವಾರ ಮುಂಜಾನೆ ಅಕ್ಕ ಪಕ್ಕದ ರೈತರು ಕಾಲುವೆಯಲ್ಲಿ ವಾಹನ ತೇಲಾಡುತ್ತಿರುವುದನ್ನು ಕಂಡು ಘಟಪ್ರಭಾ ಪೊಲೀಸರಿಗೆ ಮಾಹಿತಿ ನೀಡಿದರು. ಪೊಲೀಸರು, ನೀರಾವರಿ ಇಲಾಖೆಯ ಅಧಿಕಾರಿಗಳ ಸಹಾಯ ಪಡೆದು ಕಾಲುವೆಯ ನೀರಿನ ಹರಿವಿನ ಪ್ರಮಾಣ ಕಡಿಮೆಗೊಳಿಸಿ ಕ್ರೇನ್ ಯಂತ್ರದ ಮೂಲಕ ಕಾರನ್ನು ಮೇಲಕ್ಕೆ ಎತ್ತುವಲ್ಲಿ ಸಫಲರಾದರು. ಕಾರಿನಲ್ಲಿ ಮೃತ ವ್ಯಕ್ತಿಯೊಬ್ಬನೇ ಇದ್ದನೋ ಅಥವಾ ಆತನೊಂದಿಗೆ ಮತ್ಯಾರಾದರೂ ಇದ್ದರೋ ಎಂಬ ಕುರಿತು ಸ್ಪಷ್ಟ ಸುಳಿವು ದೊರೆತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಗೋಕಾಕ ಡಿ.ಎಸ್.ಪಿ. ಬಸವರಾಜ ಕಡಕೋಳ, ಮೂಡಲಗಿ ಸಿ.ಪಿ.ಐ. ಎಸ್.ಎಂ.ಓಲೇಕಾರ, ಘಟ ಪ್ರಭಾ ಠಾಣೆಯ ಎಸ್.ಐ. ರವಿಕುಮಾರ ಕಪ್ಪತನವರ ಭೇಟಿ ನೀಡಿ ಕಾರ್ಯ ಚರಣೆಯ ನೇತೃತ್ವ ವಹಿಸಿದ್ದರು.
ಈ ಬಗ್ಗೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪೇದೆಯ ಸಾಹಸ : ಘಟಪ್ರಭಾ ಠಾಣೆಯ ಪೇದೆ ಕೆ.ಬಿ.ಮೆಟಗುಡ್ಡ ಹಾಗೂ ಹುಕ್ಕೇರಿಯ ಬಸವಂತ ಮತ್ನಾಳೆ ಇಬ್ಬರು ತುಂಬಿ ಹರಿಯು ತ್ತಿರುವ ಕಾಲುವೆಗೆ ಧುಮುಕಿ ಜಲಾವೃತಗೊಂಡ ವಾಹನವನ್ನು ಮೇಲಕ್ಕೆ ಎತ್ತಲು ಕ್ರೇನ್ ಹಾಗೂ ಕಾರನ್ನು ಒಂದಕ್ಕೊಂದು ಜೋಡಣೆ ಆಗುವಂತೆ ಮಾಡಿದರು. ಈ ಸಾಹಸಕ್ಕೆ ನೆರೆದ ಜನರು ಹಾಗೂ ಪೊಲೀಸ್ ಅಧಿಕಾರಿಗಳು ಪ್ರಶಂಸೆ ವ್ಯಕ್ತಪಡಿಸಿದರು.