ಯಾದಗಿರಿ: ತಾಲ್ಲೂಕಿನ ಗಡಿಭಾಗದ ಧಾರ್ಮಿಕ ಕ್ಷೇತ್ರವಾಗಿರುವ ಕಾಳೆಬೆಳಗುಂದಿ ಬನದೇಶ್ವರ ಜಾತ್ರೆ ಅಂಗವಾಗಿ ಭಾನುವಾರ ಸಾವಿರಾರು ಭಕ್ತರ ಮಧ್ಯೆ ರಥೋತ್ಸವವು ಅದ್ದೂರಿಯಾಗಿ ಜರುಗಿತು.
ದೇವಸ್ಥಾನ ಅರ್ಚಕರು ದೇವರ ಮೂರ್ತಿಯನ್ನು ರಥೋತ್ಸವದಲ್ಲಿ ಕೂಡಿಸುವ ಮೂಲಕ ರಥೋತ್ಸವಕ್ಕೆ ಚಾಲನೆ ನೀಡಿದರು. ಭಕ್ತರು ರಥದ ಮೇಲೆ ಉತ್ತುತ್ತಿ, ಬಾಳೆ ಹಣ್ಣು ಭಕ್ತಿಯಿಂದ ಪ್ರಾರ್ಥಿಸಿ ಬನದೇಶ್ವರ ಮಹಾರಾಜ್ ಕಿ ಜೈ ಎಂದು ಜೈಕಾರ ಹಾಕಿ ತಮ್ಮ ಹರಕೆ ಸಮರ್ಪಿಸಿದರು.
ರಥೋತ್ಸವ ಮುಂಭಾಗದಲ್ಲಿ ಹಲವರು ತಮ್ಮ ಕೈಯಲ್ಲಿ ಬೆಳಕಿನ ದಿವಟಿಗೆಗಳನ್ನು ಹಿಡಿದುಕೊಂಡು ಹೋಗುತ್ತಿರುವುದು ಹಾಗೂ ವಿವಿಧ ಸಂಗೀತ ವಾದ್ಯಗಳು, ಪುರವಂತರ ಪುರವಂತಿಕೆ ಮಧ್ಯೆ ರಥೋತ್ಸವ ನೋಡುಗರ ಕಣ್ಮನ ಸೆಳೆಯಿತು. ದೇವಸ್ಥಾನಕ್ಕೆ ವಿದ್ಯುತ್ ಬೆಳಕಿನ ಅಲಂಕಾರ ಮಾಡಲಾಗಿತ್ತು. ರಥೋತ್ಸವ ಮುನ್ನ ದೇವಸ್ಥಾನದಲ್ಲಿ ವಿಶೇಷ ಪೂಜೆಗಳು ನಡೆದವು. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ-ದಿಂದ ಭಕ್ತರು ಆಗಮಿಸಿದ್ದರು.
ದೇವಸ್ಥಾನ ಸಮಿತಿ ಅಧ್ಯಕ್ಷ ಮಲ್ಲರೆಡ್ಡಿಗೌಡ ಕಣೆಕಲ್, ಜಿಲ್ಲಾ ನಾಯಾಧೀಶರಾದ ವಿದ್ಯಾವತಿ ಅಕ್ಕಿ, ಚಿದಾನಂದಪ್ಪ ಕಾಳಬೆಳಗುಂದಿ, ಪ್ರೇಮರಾಜ್ ದೋಕಾ, ಡಾ.ಅಮರೇಶ ಗೌಡರ್ ಸೈದಾಪುರ, ಸಿದ್ದಣಗೌಡ ಕಡೇಚೂರು, ಬನದಪ್ಪ ಮಾದ್ವಾರ, ವಿಶ್ವನಾಥರೆಡ್ಡಿ ಗೊಂದಡಗಿ, ವೆಂಕಟರೆಡ್ಡಿ ಹತ್ತಿಕುಣಿ, ಬನಶಂಕರ ಕಿಲ್ಲನಕೇರಾ, ಮಲ್ಲಿಕಾರ್ಜುನರೆಡ್ಡಿ ಮುಷ್ಟೂರು, ವೆಂಕೋಬಾ ಪೂಜಾರಿ ಇದ್ದರು.