ನವದೆಹಲಿ: ಕಾವೇರಿ ನ್ಯಾಯಮಂಡಳಿ `ಐತೀರ್ಪು' ಅಧಿಸೂಚನೆ ಹೊರಡಿಸದಂತೆ ಪ್ರಧಾನಿ ಮನಮೋಹನ್ಸಿಂಗ್ ಅವರಿಗೆ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮಂಗಳವಾರ ಮನವಿ ಮಾಡಿದರು.
`ಕರ್ನಾಟಕಕ್ಕೆ ಕಾವೇರಿ ನ್ಯಾಯಮಂಡಳಿ ಐತೀರ್ಪಿನಲ್ಲಿ ನ್ಯಾಯ ದೊರೆಯದೆ ಇರುವುದರಿಂದ ತರಾತುರಿಯಲ್ಲಿ ಅಧಿಸೂಚನೆ ಹೊರಡಿಸಬಾರದು' ಎಂದು ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿದರು.
ರೇಸ್ಕೋರ್ಸ್ ರಸ್ತೆಯಲ್ಲಿರುವ ಪ್ರಧಾನಿ ಅಧಿಕೃತ ನಿವಾಸದಲ್ಲಿ ಸಿಂಗ್ ಅವರನ್ನು ಗೌಡರು ಭೇಟಿ ಮಾಡಿದ್ದರು. ಪ್ರಧಾನಿ ಎಲ್ಲವನ್ನೂ ತಾಳ್ಮೆಯಿಂದ ಆಲಿಸಿದ್ದಾರೆ. ಈ ಬಗ್ಗೆ ಪರಿಶೀಲಿಸುವ ಭರವಸೆ ನೀಡಿದ್ದಾರೆಂದು ಪತ್ರಕರ್ತರಿಗೆ ತಿಳಿಸಿದರು.
ಕಾವೇರಿ ನ್ಯಾಯಮಂಡಳಿ ಅಂತಿಮ ತೀರ್ಪನ್ನು ಕರ್ನಾಟಕವು ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ವಿಶೇಷ ಮೇಲ್ಮನವಿ ಸಲ್ಲಿಸಿದೆ. ಈ ಅರ್ಜಿ ಇತ್ಯರ್ಥವಾಗುವ ಮೊದಲೇ ಅಧಿಸೂಚನೆ ಪ್ರಕಟಣೆ ನ್ಯಾಯಸಮ್ಮತವಾದ ಕ್ರಮವಾಗಲಾರದು. ಐತೀರ್ಪು ಅಧಿಸೂಚನೆ ಪ್ರಕಟಣೆಗೆ ಇಷ್ಟೊಂದು ಅವಸರವೇಕೆ. ಎಲ್ಲ ರಾಜ್ಯಗಳ ಅಭಿಪ್ರಾಯ ಕೇಳಿದ ಬಳಿಕ ಕೇಂದ್ರ ಸರ್ಕಾರ ಅಂತಿಮ ತೀರ್ಪು ಕುರಿತು ಅಧಿಸೂಚನೆ ಹೊರಡಿಸಲಿ ಎಂದು ಮಾಜಿ ಪ್ರಧಾನಿ ಆಗ್ರಹಿಸಿದರು.
ಕರ್ನಾಟಕವು ತಮಿಳುನಾಡಿಗೆ ಸಾಕಷ್ಟು ನೀರು ಬಿಡುಗಡೆ ಮಾಡಿ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಕಾವೇರಿ ಜಲಾಶಯಗಳಲ್ಲಿ ಸಂಗ್ರಹವಾಗಿರುವ ನೀರು ಮೇ ಅಂತ್ಯದವರೆಗೆ ಕುಡಿಯಲು ಸಾಕಾಗದು. ಈ ಸಂದರ್ಭದಲ್ಲಿ ನೀರು ನಿರ್ವಹಣೆ ಮಂಡಳಿ ರಚಿಸುವುದು ಸೂಕ್ತ ಕ್ರಮವಲ್ಲ. ಬೆಂಗಳೂರು ಸೇರಿದಂತೆ ಕಾವೇರಿ ನದಿ ಪಾತ್ರದ ನಗರ ಮತ್ತು ಪಟ್ಟಣಗಳಿಗೆ ಕುಡಿಯಲು 50 ಟಿಎಂಸಿ ಅಡಿ ನೀರು ಅಗತ್ಯವಿದೆ. ಈಗಿರುವುದು ಬರೀ 16 ಟಿಎಂಸಿ ಅಡಿ ಮಾತ್ರ ಎಂದು ಮಾಜಿ ಪ್ರಧಾನಿ ಹೇಳಿದರು.