ಬೆಂಗಳೂರು: `ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಭಿವೃದ್ಧಿಗೆ ಸರ್ಕಾರ ಬಿಡುಗಡೆ ಮಾಡಿರುವ ವಿಶೇಷ ಯೋಜನೆಬಳಸಿಕೊಂಡು ನಿಗಮದ ಸರ್ವತೋಮುಖ ಅಭಿವೃದ್ಧಿ ಹಾಗೂ ಕುಶಲಕರ್ಮಿಗಳ ಸಮಸ್ಯೆಗಳನ್ನು ಪರಿಹರಿಸಲು ಶ್ರಮಿಸಲಾಗುವುದು' ಎಂದು ಸಣ್ಣ ಕೈಗಾರಿಕೆ ಸಚಿವ ಪ್ರಕಾಶ್ ಬಿ.ಹುಕ್ಕೇರಿ ಹೇಳಿದರು.
ಕರ್ನಾಟಕ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮವು ಸೋಮವಾರ ನಗರದಲ್ಲಿ ಆಯೋಜಿಸಿದ್ದ `ಕಾವೇರಿ' ಕರಕುಶಲ ವಸ್ತುಗಳು, ಕೈಮಗ್ಗ ಮತ್ತು ಆಭರಣಗಳ ವಸ್ತುಪ್ರದರ್ಶನ ಮತ್ತು ಮಾರಾಟ ಮೇಳವನ್ನು ಉದ್ಘಾಟಿಸಿ, ನಿಗಮಕ್ಕೆ ಸ್ವಂತ ಕಟ್ಟಡವಿಲ್ಲ. ಕಟ್ಟಡ ನಿರ್ಮಾಣಕ್ಕೆ ಶೀಘ್ರ ಹಣ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸೂರಜ್ಕುಂಡ್ನಲ್ಲಿ ನಿಗಮದ ವತಿಯಿಂದ ತೆರೆಯಲಾಗಿರುವ ವ್ಯಾಪಾರ ಮಳಿಗೆಗೆ ಗ್ರಾಹಕರುರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದ್ದರಿಂದ ದೇಶದ ವಿವಿಧ ಭಾಗಗಳಲ್ಲಿ ಕಲಾಮೇಳವನ್ನು ಏರ್ಪಡಿಸಲಾಗುವುದು ಎಂದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಾ.ಜಿ.ಕಲ್ಪನ ಮಾತನಾಡಿ, ರಾಜ್ಯದಲ್ಲಿರುವ ಕುಶಲಕರ್ಮಿಗಳನ್ನು ಪ್ರೋತ್ಸಾಹಿಸುವ ಮತ್ತು ಅವರು ಉತ್ಪಾದಿಸಿದ ವಸ್ತುಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವ ಉದ್ದೇಶದಿಂದ ಈ ಮೇಳವನ್ನು ಆಯೋಜಿಸಲಾಗಿದೆ. ಮೇಳವು ಜುಲೈ 24ರ ವರೆಗೆ ನಡೆಯಲಿದೆ ಎಂದರು.
ಮೇಳದಲ್ಲಿ ನೇಕಾರಿಕೆ ಉತ್ಪನ್ನಗಳು, ಮಾರ್ಬಲ್ ಕಲ್ಲಿನಲ್ಲಿ ಮಾಡಲಾಗಿರುವ ಸೂಷ್ಮ ಕಲಾಕೃತಿಗಳು, ಬೀಟೆ ಮತ್ತಿತರರ ಮರದಲ್ಲಿ ತಯಾರಿಸಿರುವ ಕೆತ್ತನೆಗಳು ಸೇರಿದಂತೆ ಹಲವು ಬಗೆಯ ವಸ್ತುಗಳು ಶೇ 10ರಷ್ಟು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ ಎಂದರು.
ವಿಳಾಸ: `ಕಾವೇರಿ', ರಾಜ್ಯ ಆರ್ಟ್ಸ್ ಅಂಡ್ ಕ್ರಾಪ್ಟ್ಸ್ ಎಂಪೋರಿಯಂ, ನಂ. 8/30, 6ನೇ `ಸಿ' ಮುಖ್ಯರಸ್ತೆ, 30ನೇ ಅಡ್ಡರಸ್ತೆ, ಜಯನಗರ 4ನೇ ಹಂತ, ಪೊಲೀಸ್ ಠಾಣೆ ಎದರು.