ಮಂಡ್ಯ: ಕಾವೇರಿ ನದಿ ನೀರು ವಿವಾದ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಕಾನೂನು ಹೋರಾಟ ನಡೆಸುತ್ತಾ ಬಂದಿರುವ ಕರ್ನಾಟಕ ಸರ್ಕಾರವು ರಾಜ್ಯದ ಪರ ನ್ಯಾಯಾಲಯದಲ್ಲಿ ವಾದಿಸಲು ವಕೀಲರಿಗೆ 21 ವರ್ಷಗಳಲ್ಲಿ ಬರೋಬ್ಬರಿ ರೂ 25.80 ಕೋಟಿ ವೃತ್ತಿ ಶುಲ್ಕ ಪಾವತಿಸಿದೆ!
ಉಭಯ ರಾಜ್ಯಗಳು, ವಕೀಲರಿಗೆ ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತಾ ಬಂದಿದ್ದರೂ, ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. 1990ರಲ್ಲಿ ಕೇಂದ್ರ ಸರ್ಕಾರ ತಮಿಳುನಾಡು ಸರ್ಕಾರದ ಕೋರಿಕೆಯಂತೆ ಅಂತರ ರಾಜ್ಯ ಜಲ ವಿವಾದ ಕಾಯ್ದೆ 1956 ಸೆಕ್ಷನ್ 4ರ ಅನ್ವಯ ಕಾವೇರಿ ನೀರು ನ್ಯಾಯ ಮಂಡಳಿ ರಚಿಸಿತು.
ಆ ಬಳಿಕ ನ್ಯಾಯಾಲಯದಲ್ಲಿ ಕಾವೇರಿ ಜಲ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ಪರ ವಕಾಲತ್ತು ವಹಿಸಲು ವಕೀಲರಿಗೆ ರಾಜ್ಯ ಸರ್ಕಾರ 1990 ರಿಂದ 2011ರ ನವೆಂಬರ್ ತಿಂಗಳ ಅಂತ್ಯದವರೆಗೆ ಶುಲ್ಕವಾಗಿ ರೂ 25.80 ಕೋಟಿ ಖರ್ಚು ಮಾಡಿದೆ.
2011ರ ಡಿಸೆಂಬರ್ 14 ರಂದು ನಡೆದ ವಿಧಾನ ಪರಿಷತ್ತಿನ ಕಲಾಪದಲ್ಲಿ ಶಾಸಕ ಅಶ್ವತ್ಥ ನಾರಾಯಣ ಅವರು ಕೇಳಿದ ಪ್ರಶ್ನೆಗೆ ಜಲ ಸಂಪನ್ಮೂಲ ಸಚಿವ ಬಸವರಾಜ ಬೊಮ್ಮಾಯಿ ನೀಡಿದ ಉತ್ತರದಲ್ಲಿ ಈ ಮಾಹಿತಿ ಇದೆ.