ಶ್ರೀರಂಗಪಟ್ಟಣ: ಗಂಜಾಂನ ಆದಿಶಂಕರ ಮಠದ ವತಿಯಿಂದ ಮಳೆ, ಬೆಳೆ, ಗೋಮಾತೆ ಹಾಗೂ ಗ್ರಾಮಸ್ಥರ ಅಭ್ಯುದಯಕ್ಕಾಗಿ ಸಂಕಲ್ಪಿಸಿ, ಭಾನುವಾರ ಕಾವೇರಿ ನದಿಗೆ ಮಹಾ ಆರತಿ ಬೆಳಗಲಾಯಿತು.
ನಿಮಿಷಾಂಬ ದೇವಾಲಯ ಸಮೀಪ, ಸಂಜೆ ಪ್ರದೋಷ ಕಾಲದಲ್ಲಿ ಕಾವೇರಿ ನದಿಗೆ ಪಂಚ ಆರತಿಗಳನ್ನು ಸಾಧು, ಸಂತರು ಏಕಕಾಲದಲ್ಲಿ ಬೆಳಗಿದರು. ಆದಿಚುಂಚನಗಿರಿ ಶಾಖಾ ಮಠದ ಪುರುಷೋತ್ತಮಾನಾಥ ಸ್ವಾಮೀಜಿ, ಶಾಶ್ವತಿ ಧಾರ್ಮಿಕ ಕ್ರಿಯಾ ಸಮಿತಿಯ ಡಾ. ಭಾನುಪ್ರಕಾಶ್ ಶರ್ಮಾ, ಆದಿಶಂಕರ ಮಠದ ಸ್ವಾಮಿ ಗಣೇಶ ಸ್ವರೂಪಾನಂದಗಿರಿ, ರತ್ನಗಿರಿಯ ಶಿವನಮಲೈ ಸ್ವಾಮೀಜಿ ಇತರರು ಕಾವೇರಿ ಮಾತೆ ಹಾಗೂ ಆದಿ ಶಂಕರಚಾರ್ಯರ ಪ್ರತಿಮೆಗಳನ್ನಿಟ್ಟು ಪೂಜಿಸಿದರು.
ನದಿಯ ತಟದಲ್ಲಿ ವಿಪ್ರ ಮಹಿಳೆಯರು ಅರ್ಚಿತ ಕರ್ಪೂರದ ಆರತಿಯನ್ನು ಹಿಡಿದು ಅಷ್ಟೋತ್ತರ ಹಾಗೂ ಲಲಿತ ಸಹಸ್ರನಾಮ ಪಠಿಸಿದರು. ಮಹಾ ಆರತಿಯ ಬಳಿಕ ನದಿಯಲ್ಲಿ ಆರತಿಯನ್ನು ತೇಲಿ ಬಿಟ್ಟರು. ಬಳಿಕ ಪುರುಷೋತ್ತಮಾನಾಥ ಸ್ವಾಮೀಜಿ ಮಾತನಾಡಿ, ನದಿಗಳು ಸದಾ ಕಾಲ ಹರಿಯು ವಂತಾದರೆ ಜೀವ ಸಂಕುಲ ಸಂತೃಪ್ತಿಯಿಂದ ಜೀವಿಸುತ್ತವೆ. ಹಾಗಾಗಿ ನದಿಗಳು ಕಲುಷಿತ ಆಗದಂತೆ ನೋಡಿಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.