ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ನೀರಿಗಾಗಿ ಪ್ರತಿಭಟನೆಯ ಆಕ್ರೋಶ

Last Updated 7 ಅಕ್ಟೋಬರ್ 2012, 8:15 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ತಮಿಳುನಾಡಿಗೆ ಕಾವೇರಿ ನೀರು ಬಿಡುತ್ತಿರುವುದನ್ನು ವಿರೋಧಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಹಮ್ಮಿಕೊಂಡಿದ್ದ ಜಿಲ್ಲಾ ಬಂದ್ ಹಿನ್ನೆಲೆಯಲ್ಲಿ ಶನಿವಾರ ನಗರದಲ್ಲಿ ಹಲವು ಸಂಘಟನೆ ಹಾಗೂ ರಾಜಕೀಯ ಪಕ್ಷಗಳು ಪ್ರಧಾನಿ ಡಾ.ಮನಮೋಹನ್ ಸಿಂಗ್ ಮತ್ತು ತಮಿಳು ನಾಡು ಮುಖ್ಯಮಂತ್ರಿ ಜಯಲಲಿತ ಪ್ರತಿಕೃತಿ ದಹನ ಮಾಡಿ ಆಕ್ರೋಶ ವ್ಯಕ್ತಪಡಿಸಿದವು.

ಬಿಜೆಪಿ: ಪ್ರತಿ ದಿನ 9 ಸಾವಿರ ಕ್ಯೂಸೆಕ್ ಕಾವೇರಿ ನೀರು ತಮಿಳುನಾಡಿಗೆ ಹರಿಬಿಡುವಂತೆ ಕಾವೇರಿ ನದಿ ನೀರು ಪ್ರಾಧಿಕಾರ ನೀಡಿರುವ ಸೂಚನೆಯನ್ನು ಖಂಡಿಸಿ ಬಿಜೆಪಿ ಕಾರ್ಯಕರ್ತರು ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ನೇತೃತ್ವದಲ್ಲಿ ಪ್ರತಿಭಟಿಸಿ ಕೇಂದ್ರ ಸರ್ಕಾರದ ಪ್ರತಿಕೃತಿ ಸುಟ್ಟುಹಾಕಿದರು.

 ಪಕ್ಷದ ಮುಖಂಡರಾದ ಪ್ರೇಂಕುಮಾರ್, ರೇಖಾಹುಲಿಯಪ್ಪಗೌಡ, ಬಿ.ರಾಜಪ್ಪ, ವರಸಿದ್ದಿ ವೇಣುಗೋಪಾಲ್, ನಾರಾಯಣಗೌಡ, ದೇ ರಾಜಶೆಟ್ಟಿ, ಕನಕರಾಜ್‌ಅರಸ್, ನಗರಸಭೆ ಸದಸ್ಯ ರಾದ ಲಕ್ಷ್ಮಮ್ಮ, ಪುಷ್ಪರಾಜ್, ಕೆ.ಶ್ರೀನಿವಾಸ, ಮಂಜುನಾಥ, ನಿಂಗೇಗೌಡ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಎಐಟಿ ವಿದ್ಯಾರ್ಥಿಗಳ ಪ್ರತಿಭಟನೆ: ಕಾವೇರಿ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿ ಆದಿಚುಂಚ ನಗಿರಿ ತಾಂತ್ರಿಕ ಕಾಲೇಜಿನ ವಿದ್ಯಾರ್ಥಿಗಳು ಪ್ರಾಂಶುಪಾಲ ಸಿ.ಕೆ.ಸುಬ್ಬರಾಯ ನೇತೃತ್ವದಲ್ಲಿ ಹಳೇ ತಾಲ್ಲೂಕು ಕಚೇರಿ ಆವರಣದಿಂದ ಮೆರವಣಿಗೆ ಹೊರಟು, ಮುಖ್ಯ ರಸ್ತೆಯಲ್ಲಿ ತೆರಳಿ ಆಜಾದ್‌ಮೈದಾನದಲ್ಲಿ ಪ್ರತಿಭಟನೆ ನಡೆಸಿದರು. ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಸಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.

ಛಾಯಾಗ್ರಾಹಕರ ಸಂಘ: ತಾಲ್ಲೂಕು ಛಾಯಾಗ್ರಾಹಕರ ಸಂಘದ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ನಗರದ ಮುಖ್ಯ ರಸ್ತೆಯಲ್ಲಿ ಪ್ರತಿಭಟನಾ ಮೆರವಣಿಗೆ ನ ಡೆಸಿದರು. 

 ತಾಲ್ಲೂಕು ಅಧ್ಯಕ್ಷ ಜಯಚಂದ್ರ, ಉಪಾಧ್ಯಕ್ಷ ರಘು, ಪದಾಧಿಕಾರಿಗಳಾದ ರವಿ, ರೇಣುಕಾ, ಎ.ಎನ್.ಮೂರ್ತಿ, ಗಿರಿಧರ ಯತೀಶ್, ಜೀವನ್ ಕೆ.ಶೆಟ್ಟಿ ಪ್ರತಿಭಟನೆಯಲ್ಲಿದ್ದರು.

ಕರ್ನಾಟಕ ರಕ್ಷಣಾ ವೇದಿಕೆ: ವೇದಿಕೆ ಜಿಲ್ಲಾ ಅಧ್ಯಕ್ಷ ತೇಗೂರು ಜಗದೀಶ್‌ನೇತೃತ್ವದಲ್ಲಿ ಪ್ರತಿಭ ಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ಕೂಡಲೇ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ವರ್ತಕರ ಸಂಘ: ಜಿಲ್ಲಾ ಬಂದ್ ಬೆಂಬಲಿಸಿ ಸಂಘದ ಪದಾಧಿಕಾರಿಗಳು ನಗರದಲ್ಲಿ ಮೆರವಣಿಗೆ ನಡೆಸಿದರು.
ಸಂಘದ ಅಧ್ಯಕ್ಷ ದಿನೇಶ್‌ಗುಪ್ತಾ, ಉಪಾಧ್ಯಕ್ಷ ನಾಗೇಶ್‌ಶೆಟ್ಟಿ, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಶಿವಪ್ರಕಾಶ ಭಾಗವಹಿಸಿದ್ದರು.

ಬಿಎಸ್‌ಆರ್ ಕಾಂಗ್ರೆಸ್: ಕಾವೇರಿ ನದಿ ನೀರು ತಮಿಳುನಾಡಿಗೆ ಹರಿಬಿಡುತ್ತಿರುವುದನ್ನು ವಿರೋಧಿಸಿ ಬಿ.ಎಸ್.ಆರ್.ಕಾಂಗ್ರೆಸ್ ಮುಖಂ ಡರು ಮತ್ತು ಕಾರ್ಯಕರ್ತರು ತಮಿಳನಾಡು ಮುಖ್ಯಮಂತ್ರಿ ಜಯಲಲಿತಾ ಅವರ ಅಣಕು ಶವ ಯಾತ್ರೆ ನಡೆಸಿ, ಸಾರ್ವಜನಿಕರ ಗಮನ ಸೆಳೆದರು. ಪಕ್ಷದ ಜಿಲ್ಲಾ ಅಧ್ಯಕ್ಷ ಶಂಕರ್, ಬಿಎಸ್‌ಆರ್ ಅಭಿಮಾನಿ ಬಳಗದ ಅಧ್ಯಕ್ಷ ಅನಿಲ್ ಆನಂದ ಪ್ರತಿಭಟನೆ ನೇತೃತ್ವ ವಹಿಸಿದ್ದರು.

ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ: ಹಸಿರು ಸೇನೆ ಜಿಲ್ಲಾ ಅಧ್ಯಕ್ಷ ಶಶಿಧರ ನೇತೃತ್ವದಲ್ಲಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಕಾರ್ಯಕರ್ತರು ಕಾವೇರಿ ನೀರು ತಮಿಳುನಾಡಿಗೆ ಬಿಡದಂತೆ ಆಗ್ರಹಿಸಿ ಹನುಮಂತಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಜಯಕರ್ನಾಟಕ ಸಂಘಟನೆ, ಕನ್ನಡ ಸೇನೆ ಕರ್ನಾಟಕ ಹಾಗೂ ಪ್ರವೀಣ್ ಶೆಟ್ಟಿ ನೇತೃತ್ವದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ, ಜಯಲಲಿತ ಪ್ರತಿಕೃತಿ ದಹನ ಮಾಡಿದರು.
 ನಗರ ಸಂಪೂರ್ಣ ಬಂದ್:  ಬೆಳಿಗ್ಗೆ ಹಾಲು ಮತ್ತು ಪತ್ರಿಕೆ ವಿತರಣೆ ಮಾತ್ರ ಎಂದಿನಂತೆ ನಡೆಯಿತು.

ಬೆಳಿಗ್ಗೆಯಿಂದಲೇ ಸಾರಿಗೆ ಸೇವೆ ಸ್ಥಗಿತಗೊಂಡಿದ್ದರಿಂದ ಗ್ರಾಮಾಂತರ ಪ್ರದೇಶಗಳಿಗೆ ಪತ್ರಿಕೆ ವಿತರಣೆಯೂ ಆಗಲಿಲ್ಲ. ಸುದ್ದಿ ವಾಹಿನಿಗಳನ್ನು ಹೊರತುಪಡಿಸಿ ಟಿ.ವಿ.ಗಳಲ್ಲೂ ಮನರಂಜನಾ ವಾಹಿನಿಗಳ ಪ್ರಸಾರ ಬೆಳಿಗ್ಗೆಯಿಂದ ಸಂಜೆವರೆಗೂ ಸಂಪೂರ್ಣ ಬಂದ್ ಆಗಿತ್ತು. ಔಷಧ ಮಳಿಗೆಗಳು ಮತ್ತು ಆಸ್ಪತ್ರೆಗಳು ಮಾತ್ರ ಎಂದಿನಂತೆ ಕಾರ್ಯನಿರ್ವಹಿಸಿದವು.

ತರಕಾರಿ, ದಿನಸಿ ಪದಾರ್ಥಗಳ ಮಾರಾಟವೂ ಇಲ್ಲದೆ ಜನಸಾಮಾನ್ಯರು ಪರದಾಡು ವಂತಾಯಿತು. ಕೂಲಿ ಕಾರ್ಮಿಕರು ಕೂಲಿ ಸಿಗದೆ ಆಜಾದ್ ಪಾರ್ಕ್ ವೃತ್ತದಲ್ಲಿ ಚಿಂತಾಕ್ರಾಂತರಾಗಿ ಕುಳಿತ್ತಿದ್ದ ಮನ ಕರಗುವ ದೃಶ್ಯ ಬೆಳಿಗ್ಗೆ ಕಂಡುಬಂತು.

ಕಾರ್ಮಿಕರನ್ನು ತೋಟಗಳಿಗೆ ಕರೆದೊಯ್ಯಲು ವಾಹನಗಳು ಬಾರದೆ ಕಾರ್ಮಿಕರು ಮನೆಗಳಿಗೆ ಮರಳುವಂತಾಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT