ಬಂಗಾರಪೇಟೆ: ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಕೇಂದ್ರ ಸರ್ಕಾರವು ತಾರತಮ್ಯ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ಕರ್ನಾಟಕ ದಲಿತ ಸಿಂಹಸೇನೆ ಕಾರ್ಯಕರ್ತರು ಸೋಮವಾರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್ ಎಸ್.ಎಂ.ಮಂಗಳಾ ಅವರಿಗೆ ಮನವಿ ಸಲ್ಲಿಸಿದರು.
ರಾಜ್ಯದ ಹಲವೆಡೆ ತೀವ್ರ ಬರಗಾಲ ಪರಿಸ್ಥಿತಿ ತಲೆದೂರಿದೆ. ಕುಡಿಯಲೂ ನೀರು ಸಿಗದ ದಾರುಣ ಪರಿಸ್ಥಿತಿ ಉದ್ಭವಿಸಿದೆ. ಕಾವೇರಿ ನದಿ ಅಚ್ಚುಕಟ್ಟು ಪ್ರದೇಶದ ಕೆಲವೆಡೆ ನೀರು ಸಾಕಾಗದೆ ಬೆಳೆ ಒಣಗುತ್ತಿದೆ ಎಂದು ತಿಳಿಸಿದರು.
ಇಂಥ ಸಂದಿಗ್ಧ ಪರಿಸ್ಥಿತಿಯಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮಿಳುನಾಡಿಗೆ ಪ್ರತಿದಿನ 9 ಸಾವಿರ ಕ್ಯೂಸೆಕ್ಸ್ ನೀರನ್ನು ಅಕ್ಟೋಬರ್ 20ರವರೆಗೆ ಹರಿಸುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿದ್ದಾರೆ. ಇದರಿಂದ ಕಾವೇರಿ ನದಿಯನ್ನೇ ಅವಲಂಬಿಸಿರುವ ಕೋಟ್ಯಾಂತರ ರೈತಾಪಿ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಗಿದೆ ಎಂದು ಅಭಿಪ್ರಾಯಪಟ್ಟರು.
ಕರ್ನಾಟಕದ ಜನತೆಗೆ ಈ ಆದೇಶ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಪ್ರಸ್ತುತ ಬರ ಪರಿಸ್ಥಿತಿ ಪರಿಗಣಿಸಿ, ತಮಿಳುನಾಡಿಗೆ ಹರಿಸುತ್ತಿರುವ ನೀರನ್ನು ತಕ್ಷಣ ನಿಲ್ಲಿಸಬೇಕೆಂದು ಆಗ್ರಹಿಸಿದರು. ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಸೂಲಿಕುಂಟೆ ಆನಂದ್, ಮುಖಂಡರಾದ ರಮೇಶ್, ಪಿಳ್ಳಪ್ಪ,ಪ್ರವೀಣ್ಕುಮಾರ್, ಅಯ್ಯಪ್ಪ, ಪ್ರಕಾಶ್ ಮತ್ತಿತರರು ಇದ್ದರು.