ಬೆಂಗಳೂರು: `ಕಾವೇರಿ ಹೋರಾಟದಲ್ಲಿ ಭಾಗಿಯಾದ ರೈತರ ವಿರುದ್ದ ರಾಜ್ಯ ಸರ್ಕಾರ ಪ್ರಕರಣ ದಾಖಲಿಸಿರುವುದು ಖಂಡನಾರ್ಹ. ರೈತರ ಪರ ವಕೀಲರ ಶುಲ್ಕ ಮತ್ತು ಕಾನೂನು ವೆಚ್ಚ ಭರಿಸುವ ಮೂಲಕ ಹೋರಾಟಕ್ಕೆ ಬೆಂಬಲ ನೀಡುತ್ತೇನೆ~ ಎಂದು ಸಂಸದ ರಾಜೀವ್ ಚಂದ್ರಶೇಖರ್ ತಿಳಿಸಿದ್ದಾರೆ.
ಕಾವೇರಿ ನದಿ ನೀರಿನ ಹಂಚಿಕೆ ವಿವಾದಕ್ಕೆ ಸಂಬಂಧಪಟ್ಟಂತೆ ಕಾವೇರಿ ನದಿ ಪ್ರಾಧಿಕಾರವೂ ವಾಸ್ತವ ನೆಲೆಗಟ್ಟಿನಲ್ಲಿ ಮಾರ್ಗೋಪಾಯಗಳನ್ನು ಸೂಚಿಸಬೇಕು ಎಂದು ಮನವಿ ಮಾಡಿದ್ದಾರೆ.
`ಶೀಘ್ರವೇ ಪ್ರಧಾನಿಯನ್ನು ಭೇಟಿಯಾಗಲಿದ್ದು, ವಿವಾದವನ್ನು ಸೌಹಾರ್ದ ರೀತಿಯಲ್ಲಿ ಬಗೆಹರಿಸಲು ಪ್ರಯತ್ನಿಸಬೇಕು~ ಎಂದು ಮನವಿ ಮಾಡುತ್ತೇನೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
`ಮಳೆಯ ಪ್ರಮಾಣ, ಪ್ರಸಕ್ತ ಪರಿಸ್ಥಿತಿಗಳು, ನೀರಿನ ಲಭ್ಯತೆಯನ್ನು ಗಮನದಲ್ಲಿಟ್ಟುಕೊಂಡು ಪರಿಹಾರ ಸೂತ್ರಗಳನ್ನು ರೂಪಿಸಬೇಕು. ಇದರೊಂದಿಗೆ ರೈತರ ಜೀವನೋಪಾಯ ಅಸ್ತವ್ಯಸ್ತಗೊಳ್ಳದಂತೆ ಕ್ರಮ ತೆಗೆದುಕೊಳ್ಳಬೇಕು. ಈ ವಿವಾದ ಇತ್ಯರ್ಥವಾಗುವವರೆಗೂ ಹೊಗನೇಕಲ್ ಯೋಜನೆಯನ್ನು ಸ್ಥಗಿತಗೊಳಿಸಬೇಕು~ ಎಂದು ಒತ್ತಾಯಿಸಿದ್ದಾರೆ.