ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ: ವಿಭಿನ್ನ ಪ್ರತಿಭಟನೆ

Last Updated 9 ಅಕ್ಟೋಬರ್ 2012, 9:00 IST
ಅಕ್ಷರ ಗಾತ್ರ

ಮೈಸೂರು: ತಮಿಳುನಾಡಿಗೆ ನೀರು ಬಿಡುತ್ತಿರುವುದನ್ನು ವಿರೋಧಿಸಿ ಜಿಲ್ಲೆಯ ವಿವಿಧೆಡೆ ಸೋಮವಾರ ಕೂಡ ಪ್ರತಿಭಟನೆಗಳು ಮುಂದುವರಿದಿವೆ. ಎಚ್.ಡಿ. ಕೋಟೆ, ನಂಜನಗೂಡು ಹಾಗೂ ಕೆ.ಆರ್.ನಗರದಲ್ಲಿ ರೈತಸಂಘದ ಸದಸ್ಯರು ಹಾಗೂ ಕನ್ನಡಪರ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರೆ, ತಿ.ನರಸೀಪುರದಲ್ಲಿ ವಿಭಿನ್ನ ರೀತಿಯ ಹೋರಾಟ ನಡೆಸಿದರು.

ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಮೂಗಿದ ಪ್ರತಿಭಟನೆಕಾರರು, ಕೆಲೆವೆಡೆ ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅವರು ಪ್ರತಿಕೃತಿಯನ್ನು ದಹನ ಮಾಡಿ, ಆಕ್ರೋಶ ವ್ಯಕ್ತಪಡಿಸಿದರು.

ತಿ.ನರಸೀಪುರ ವರದಿ:
ತಾಲ್ಲೂಕಿನ ರೈತಸಂಘ ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರು ಪಟ್ಟಣದಲ್ಲಿ ಸೋಮವಾರ ವಿಶಿಷ್ಠವಾಗಿ ಪ್ರತಿಭಟನೆ ಮಾಡಿದರು. `ಕೆಆರ್‌ಎಸ್, ಕಬಿನಿ ಜಲಾಶಯಗಳು ಮಾರಾಟಕ್ಕಿವೆ. ಕೊಳ್ಳುವವರು ಮುಂದೆ ಬನ್ನಿ~ ಎಂದು ವ್ಯಂಗ್ಯವಾಗಿ ಕೂಗುತ್ತ ಫಲಕಗಳನ್ನು ಹಿಡಿದು ಮೆರವಣಿಗೆ ಸಾಗಿದ ಕಾರ್ಯಕರ್ತರು ಅಧಿಕಾರಿಗಳ ಗಮನ ಸೆಳೆದರು. ಮಾತ್ರವಲ್ಲ; ಮಂಗಳಮುಖಿಯರಿಂದ ಕಾಂಗ್ರೆಸ್‌ನ ಶಾಸಕರು ಹಾಗೂ ಸಂಸದರ ಭಾವಚಿತ್ರಗಳಿಗೆ ಛೀಮಾರಿಯ ಹಾಕುತ್ತ ಆಕ್ರೋಶ ವ್ಯಕ್ತಪಡಿಸಿದರು.

ಹಳೇ ತಿರಮಕೂಡಲಿನ ಪಿಟೀಲು ಚೌಡಯ್ಯ ವೃತ್ತದಿಂದ ಆರಂಭಗೊಂಡ ಮೆರವಣಿಗೆಯಲ್ಲಿ ಚಾಮರಾಜನಗರದಿಂದ ಕರೆಸಲಾಗಿದ್ದ ಮಂಗಳಮುಖಿಯರು ಸ್ಥಳೀಯ ಶಾಸಕ ಹಾಗೂ ಸಂಸದರ ವಿರುದ್ಧ ದಿಕ್ಕಾರ ಕೂಗಿದರು. `ಶಾಸಕ ಡಾ.ಮಹಾದೇವಪ್ಪ ಅವರನ್ನು ಹುಡುಕಿಕೊಟ್ಟವರಿಗೆ ಬಹುಮಾನ~ ಎಂಬ ಫಲಕ ಪ್ರದರ್ಶಿಸಿದರು. ಕರುವಿನ ಕೊರಳಿಗೆ ಖಾಲಿ ಬಿಂದಿಗೆಗಳನ್ನು ಕಟ್ಟಿ ಜಾನುವಾರುಗಳ ನೀರಿನ ಬವನೆಯನ್ನು ಪ್ರದರ್ಶಿಸಿದರು.

ಅಲ್ಲದೇ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್ ಎಂ.ವಿಶ್ವೇಶ್ವರಯ್ಯ ಅವರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಜೈಕಾರ ಹಾಕುತ್ತ ಮೆರವಣಿಗೆಯಲ್ಲಿ ಅವರ ಭಾವಚಿತ್ರದ ಫ್ಲೆಕ್ಸ್‌ಗಳನ್ನೂ ಪ್ರದರ್ಶಿಸಲಾಯಿತು.

ವಿದ್ಯುತ್ ಗುತ್ತಿಗೆದಾರರ ಸಂಘ, ಕಾವೇರಿ ಕಬಿನಿ ಹಿತ ರಕ್ಷಣಾ ಸಮಿತಿ, ಪ್ರಗತಿ ಪರ ರೈತರ ಸಂಘ, ವಕೀಲರ ಸಂಘ, ನಾಗರಿಕ ಸೇವಾ ವೇದಿಕೆಯ ಸೇರಿದಂತೆ ಪಟ್ಟಣದ ವಿವಿಧ ಸಂಘಟನೆಗಳ ಪ್ರಮುಖರು ಭಾಗವಹಿಸಿದ್ದರು. ಖಾಸಗಿ ಬಸ್ ನಿಲ್ದಾಣದಲ್ಲಿ ಮಾನವ ಸರಪಳಿ ನಿರ್ಮಿಸಿ ಕೇಂದ್ರ, ರಾಜ್ಯ ಹಾಗೂ ತಮಿಳುನಾಡು ಸರ್ಕಾರಗಳ ವಿರುದ್ಧ ಘೋಷಣೆ ಕೂಗಿದರು.

ರೈತ ಸಂಘದ ಮುಖಂಡರಾದ ಕೆ.ಜಿ.ಶಿವಪ್ರಸಾದ್, ಆಲಗೂಡು ಮಹಾದೇವ್. ಮಾಡ್ರಹಳ್ಳಿ ಶಂಕರ್ ಗುರು, ಶಿವಮೂರ್ತಿ, ಚಿದರಹಳ್ಳಿ ನಾಗೇಂದ್ರ, ಕಳ್ಳಿಪುರ ಮಹಾದೇವಸ್ವಾಮಿ, ಕುಮಾರಸ್ವಾಮಿ, ಬೂದಹಳ್ಳಿ   ಶಂಕರ್, ಮಾದಾಪುರ ಶಿವಣ್ಣ, ಸಿದ್ಧಲಿಂಗಮೂರ್ತಿ, ತಾಯೂರು ಪ್ರಕಾಶ್, ವಕೀಲರಾದ ಮಾದಪ್ಪ, ನವೀನ್, ಪಾಲಾಕ್ಷಮೂರ್ತಿ, ಉಮೇಶ್, ಮದನ್ ಲಾಲ್, ಶಾಮಿಯಾನ ಶಿವರಾಜು, ಮು.ರು.ನಾಗೇಂದ್ರಕುಮಾರ್, ಶಿವಾನಂದ ಶರ್ಮ, ಕುಕ್ಕೂರು ರಾಜು, ಎಡದೊರೆ ಮಹಾದೇವಯ್ಯ, ವಾಸವಿ ಸಮಾಜದ ಬಾಬು, ಗಣೇಶ್ ಗುಪ್ತ, ರಂಗನಾಥ್, ಮುರುಳೀಧರ್, ಪ್ರಕಾಶ್,  ಎಚ್. ನಾಗರಾಜ್, ಕೆ.ಎನ್. ಪ್ರಭುಸ್ವಾಮಿ, ಲಿಂಗಪ್ಪಾಜಿ ಮತ್ತಿತರರು ಇದ್ದರು.

ಎಚ್.ಡಿ.ಕೋಟೆ ವರದಿ:
ತಾಲ್ಲೂಕು ಛಾಯಾಗ್ರಾಹಕರ ಸಂಘದ ಸದಸ್ಯರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನೆ ನಡೆಸಿದರು. ಮಿನಿ ವಿಧಾನಸೌಧದ ಮುಂಭಾಗದಿಂದ ಮೆರವಣಿಗೆ ಹೊರಟು ಬಾಪೂಜಿ ವೃತ್ತದಲ್ಲಿ ಕೆಲ ಕಾಲ ಮಾನವ ಸರಪಳಿ ನಿರ್ಮಿಸಿದರು. ನಂತರ ತಹಶೀಲ್ದಾರ್ ಡಿ.ಎಸ್. ಶಿವಕುಮಾರಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.

ಮೆರವಣಿಗೆಯುದ್ದಕ್ಕೂ ಕೇಂದ್ರ, ರಾಜ್ಯ ಹಾಗೂ ತಮಿಳುನಾಡು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
`ಕಬಿನಿ ಬಲದಂಡೆ ನಾಲೆಯ 1 ಲಕ್ಷ ಎಕರೆಗೂ ಹೆಚ್ಚು ಪ್ರದೇಶದಲ್ಲಿ ರೈತರು ನಾಟಿ ಮಾಡಿರುವ ಬತ್ತದ ಪೈರು ನೀರಿಲ್ಲದೇ ಒಣಗುತ್ತಿದೆ. ಆದ್ದರಿಂದ ಈ ಕೂಡಲೇ ಕಾವೇರಿ ನೀರು ಹರಿಸುವುದನ್ನು ನಿಲ್ಲಿಸಬೇಕು~ ಎಂದು ಕನ್ನಡ ಪ್ರಮೋದ್ ಆಗ್ರಹಿಸಿದರು.

ಸಂಘದ ಅಧ್ಯಕ್ಷ ರಾಜು ಸಾಗರ್, ಸದಸ್ಯರಾದ ಪ್ರಕಾಶ್, ಹೊನ್ನೇಗೌಡ, ಸತೀಶ್ ಆರಾಧ್ಯ, ಮನೋಜ್, ಪ್ರಮೋದ್, ನಂದಕುಮಾರ್. ರಂಗ, ರಾಜೇಶ್, ಮಂಜು, ಸ್ಟಂಟ್ ಸ್ವಾಮಿ, ಚಲುವೇಗೌಡ, ನಾಗುಸಾಗರ್, ನಾಗರಾಜ್, ನಾಗೇಂದ್ರ, ಬಾಲು, ಶಂಕರ್, ಮಹೇಂದ್ರ, ಗೊಂಬೆರಾಜು, ಗುರು, ಪಾರಿ ತಾಳಿಕೋಟೆ, ವೆಂಕಿ, ನಾಗೇಶ್ ಇದ್ದರು.

ಮತ್ತೊಂದೆಡೆ ತಾಲ್ಲೂಕಿನ ಹೆಬ್ಬಲಗುಪ್ಪೆ ಗ್ರಾಮದ ಕಬಿನಿ ಎಡದಂಡೆ ನಾಲೆಯ ಅಚ್ಚುಕಟ್ಟು ಪ್ರದೇಶದ ರೈತರು ಬೈಕ್ ಮತ್ತು ವಿವಿಧ ವಾಹನಗಳ ಮೂಲಕ ಪಟ್ಟಣದಲ್ಲಿ ರ‌್ಯಾಲಿ ನಡೆಸಿದರು. ಬಾಪೂಜಿ ಸರ್ಕಲ್‌ನಲ್ಲಿ ಬೈಕುಗಳನ್ನು ಸುತ್ತಲೂ ನಿಲ್ಲಿಸಿ ರಸ್ತೆ ತಡೆ ಮಾಡಿದರು. ಅಲ್ಲಿಂದ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಮುಖಂಡರಾದ ಮಹದೇವಪ್ಪ, ಕೆಂಡಗಣ್ಣಪ್ಪ, ನಿರಂಜನರಾಜೇ ಅರಸ್, ಮಂಜುನಾಥ್, ಲೋಕೇಶ್, ಕುಮಾರ್, ಚಲುವ, ರಾಜಾ ಇತರರು ಇದ್ದರು.

ಕೆ.ಆರ್.ನಗರ ವರದಿ:
ಇಲ್ಲಿನ ತಾಲ್ಲೂಕು ಆಡಳಿತ ಕಚೇರಿ ಮುಂದೆ ಪತ್ರಿಕೆ ವಿತರಕರು ಸೋಮವಾರ ಧರಣಿ ನಡೆಸಿದರು. ನೀರು ಹಂಚಿಕೆ ವಿಚಾರದಲ್ಲಿ ಕಾವೇರಿ ನದಿ ಪ್ರಾಧಿಕಾರ ತಳೆದಿರುವ ನಿಲುವು ಖಂಡನಾರ್ಹ. ರಾಜ್ಯ ಸರ್ಕಾರ ಕೂಡಲೇ ನೀರು ನಿಲ್ಲಿಸಿ ರಾಜ್ಯದ ರೈತರ ಹಿತ ಕಪಾಡಲು ಮುಂದಾಗಬೇಕು ಎಂದು ಘೋಷಣೆ ಕೂಗಿದರು. ರಾಮಣ್ಣ, ಮಂಜ, ಯೋಗೀಶ್, ರವಿ, ದೇವರಾಜ್, ಅಂಕಿತ, ಮಹದೇವ್, ರಕ್ಷಿತ್, ಚಂದನ್, ಕೀರ್ತಿ, ಚಲುವರಾಜು, ಚೇತನ್, ಯಶೋಧರ್, ಅನಿಲ್ ಸೇರಿದಂತೆ ಬಹುಪಾಲು ಬಾಲಕರೇ ಧರಣಿಯಲ್ಲಿ ಪಾಲ್ಗೊಂಡಿದ್ದರು.

ಇನ್ನೊಂದೆಡೆ ಕೆ.ಆರ್.ನಗರ ಆಟೊ ಮಾಲೀಕರು ಮತ್ತು ಚಾಲಕರು ಬೃಹತ್ ಮೆರವಣಿಗೆ ನಡೆಸಿದರು. ನಗಾರಿ, ಹಲಗೆಗಳನ್ನು ಬಾರಿಸುತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಇದರ ಹಿಂದಿನಿಂದಲೇ ಅಟೊಗಳನ್ನು ಸಾಲಾಗಿ ಚಲಿಸುವ ಮೂಲಕ ಗಮನ ಸೆಳದರು.

ನಂಜನಗೂಡು ವರದಿ:
ತಾಲ್ಲೂಕು ಆರ್ಯ ಈಡಿಗ ಸಮಾಜದ ಕಾಯಕರ್ತರು ಚಿಂತಾಮಣಿ ಗಣಪತಿ ದೇವಸ್ಥಾನದಿಂದ ರಾಷ್ಟ್ರಪತಿ ರಸ್ತೆ, ಅಂಗಡಿ ಬೀದಿ ಮೂಲಕ ತಹಶೀಲ್ದಾರ್ ಕಚೇರಿ ತನಕ ಬೈಕ್ ರ‌್ಯಾಲಿ ನಡೆಸಿದರು. ಸಂಘದ ಅಧ್ಯಕ್ಷ ಎನ್.ವಿ.ತಿಮ್ಮೇಗೌಡ ಮಾತನಾಡಿ, ಕಪಿಲಾ ಜಲಾಶಯ ಅಚ್ಚುಕಟ್ಟಿನಲ್ಲಿ ಒಂದು ಲಕ್ಷ ಹೆಕ್ಟೇರ್‌ಗೂ ಅಧಿಕ ಪ್ರದೇಶದಲ್ಲಿ ನೀರಾವರಿ ಬೆಳೆ ಕೃಷಿ ನಡೆದಿದೆ. ಈಗಾಗಲೇ ತಮಿಳುನಾಡಿಗೆ ನೀರು ಬಿಟ್ಟಿರುವುದರಿಂದ ಕಪಿಲಾ ಜಲಾಶಯದಲ್ಲಿ ಸಂಗ್ರಹ ಮತ್ತಷ್ಟು ಕಡಿಮೆಯಾಗಿದೆ.

ಜೊತೆಗೆ ಸೋಮವಾರದ ವಿಚಾರಣೆಯಲ್ಲಿ  ಸುಪ್ರೀಂ ಕೋರ್ಟ್ ಸ್ಪಷ್ಟ ತೀರ್ಪು ನೀಡದೆ ಮತ್ತೆ ಚೆಂಡನ್ನು ಪ್ರಧಾನಿ ಅಂಗಳಕ್ಕೆ ಕಳುಹಿದೆ. ಇದು ರಯತರಲ್ಲಿ ಮತ್ತಷ್ಟು ಆತಂಕ ಮೂಡಿಸಿದೆ. ಯಾವುದೇ ಕಾರಣಕ್ಕೂ ರೈತರ ಹಿತಾಸಕ್ತಿ ಕಡೆಗಣಿಸಿ ತಮಿಳುನಾಡಿಗೆ ನೀರು ಬಿಡುವುದನ್ನು ತಕ್ಷಣ ನಿಲ್ಲಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದರು.

ಪ್ರತಿಭಟನೆಯಲ್ಲಿ  ಮೇಘ ನಾರಾಯಣ್, ಪುರುಷೋತ್ತಮ, ಕೃಷ್ಣಪ್ಪಗೌಡ, ಜಿ.ಕೆ.ಮಂಜು, ರಾಜಶೇಖರ, ನಾಗೇಂದ್ರ,  ಏಚಗಳ್ಳಿ ರಂಗಸ್ವಾಮಿ, ತಿಮ್ಮರಾಜು, ಕಾರವಾನ್ ಗಿರೀಶ್, ಎನ್.ವಿ.ವೆಂಕಟೇಶ್, ಎನ್.ವಿ.ರವಿ, ಎನ್.ವಿ.ರಘು, ಸತ್ಯನಾರಾಯಣ, ಗೋಪಾಲ್, ಅರ್ಜುನ್, ಮಾಧು, ಇನ್ನಿತರರು ಇದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT