ಬೆಂಗಳೂರು: ‘ಕಯ್ಯಾರ ಕಿಞ್ಞಣ್ಣ ರೈ ಅವರ ಶತಮಾನೋತ್ಸವದ ಈ ಹೊತ್ತಿನಲ್ಲಾದರೂ ಕಾಸರಗೋಡು ಕರ್ನಾಟಕಕ್ಕೆ ಸೇರುವಂತಾಗ ಬೇಕು’ ಎಂದು ಹಿರಿಯ ಸಂಶೋಧಕ ಡಾ.ಎಂ.ಚಿದಾನಂದ ಮೂರ್ತಿ ಆಶಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಮಂಗಳವಾರ ಆಯೋಜಿಸಿದ್ದ ‘ಕಯ್ಯಾರ ಕಿಞ್ಞಣ್ಣ ರೈ 100ರ ಸಂಭ್ರಮ’ ಸಮಾರಂಭದಲ್ಲಿ ಮಾತನಾಡಿದರು.
‘ಕೆಲವರ ಹುನ್ನಾರದಿಂದ ಕಾಸರಗೋಡು ಕರ್ನಾಟಕದ ಕೈತಪ್ಪಿತು. ಅದನ್ನು ವಾಪಾಸ್ಸು ಕರೆತರುವ ಕೆಲಸವನ್ನು ಮುಖ್ಯಮಂತ್ರಿ ಅವರು ಮಾಡಬೇಕಿದೆ. ಆಗ ಮಾತ್ರ ಮಹಾನ್ ಕವಿ ಕಿಞ್ಞಣ್ಣ ರೈ ಅವರಿಗೆ ನಿಜ ಅರ್ಥದಲ್ಲಿ ಗೌರವ ಸಲ್ಲಿಸಿದಂತಾಗು-ತ್ತದೆ’ ಎಂದು ಅಭಿಪ್ರಾಯಪಟ್ಟರು. ‘ತುಳು ಮಾತೃ ಭಾಷೆಯಾಗಿದ್ದರೂ, ಕನ್ನಡದ ಬಗ್ಗೆ ಅಪಾರ ಒಲವಿಟ್ಟುಕೊಂಡು, ಕಥನ ಕಾವ್ಯ, ಶಿಶು ಗೀತೆಗಳನ್ನು ರಚಿಸಿದ್ದಾರೆ’ ಎಂದು ಶ್ಲಾಘಿಸಿದರು.
ವಿಮರ್ಶಕ ಡಾ.ಬಸವರಾಜ ಕಲ್ಗುಡಿ, ‘ತುಳು, ಕನ್ನಡ, ಸಂಸ್ಕೃತ ಭಾಷೆಗಳಲ್ಲಿ ಅಗಾಧ ಪಾಂಡಿತ್ಯ ಗಳಿಸಿದ್ದರೂ, ಮಕ್ಕಳ ಭಾವಕೋಶವನ್ನು ತೀಡುವಂತಹ ಸರಳ ಶಿಶುಗೀತೆಗಳನ್ನು ರಚಿಸಿದ್ದಾರೆ’ ಎಂದು ಹೇಳಿದರು.‘ಕುವೆಂಪು, ಬೇಂದ್ರೆ ಅವರಿಗಿಂತ ವಿಭಿನ್ನ ಪರಿಕಲ್ಪನೆಯಿಟ್ಟುಕೊಂಡು ಕಾವ್ಯ ಕ್ಷೇತ್ರದಲ್ಲಿ ತೊಡಗಿಕೊಂಡರು.