ಚನ್ನಮ್ಮನ ಕಿತ್ತೂರು: ಇಲ್ಲಿಯ ಕೋಟೆ ಆವರಣದಲ್ಲಿ ಇದೇ 23 ಮತ್ತು 24ರಂದು ನಡೆಯಲಿರುವ `ಕಿತ್ತೂರು ಉತ್ಸವ~ ಆಚರಣೆಯ ಪೂರ್ವ ಸಿದ್ಧತೆಗಳನ್ನು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ ಭಾನುವಾರ ಪರಿಶೀಲಿಸಿದರು.
ರಾಷ್ಟ್ರೀಯ ಹೆದ್ದಾರಿ ಬಳಿಯ ಅಶ್ವಾರೂಢ ಚನ್ನಮ್ಮ ಪ್ರತಿಮೆ ಕಟ್ಟೆಯನ್ನು ಸದ್ಯ ಹೆದ್ದಾರಿ ಪ್ರಯಾಣಿಕರಿಗೆ ನೇರವಾಗಿ ಕಾಣುವಂತೆ ಎತ್ತರಿಸಲಾಗಿದ್ದು, ಆ ಸ್ಥಳಕ್ಕೆ ಭೇಟಿ ಕೊಟ್ಟ ಜಿಲ್ಲಾಧಿಕಾರಿ ಈ ಕಾಮಗಾರಿ ನಡೆಸುತ್ತಿರುವ ಭೂಸೇನಾ ನಿಗಮದ ಅಧಿಕಾರಿಗಳಿಗೆ ಸಲಹೆಗಳನ್ನು ನೀಡಿದರು.
ಅನಂತರ ಕೋಟೆ ಆವರಣಕ್ಕೆ ಆಗಮಿಸಿ ಮುಖ್ಯ ಸಮಾರಂಭ ನಡೆಯುವ ವೇದಿಕೆಯ ಸಿದ್ಧತೆ ಮತ್ತು ಹಿಂಬದಿಗೆ ನಿರ್ಮಿಸಲು ಯೋಜಿಸಿರುವ ಮಾಧ್ಯಮ ಕೇಂದ್ರದ ಸ್ಥಳ ಪರಿಶೀಲಿಸಿದರು.
ನಂತರ ಅವರು ಮಾತನಾಡಿ, ಪರಸ್ಪರ ಗೌರವ ಮತ್ತು ಸಮನ್ವಯತೆಯಿಂದ ಕೆಲಸ ಮಾಡಿ ಕಿತ್ತೂರು ಉತ್ಸವದ ಘನತೆ ಹಾಗೂ ಉತ್ಸಾಹ ಹೆಚ್ಚಿಸುವಂತೆ ಸಲಹೆ ಇತ್ತರು.
ಸಾಂಸ್ಕೃತಿಕ ಕಾರ್ಯಕ್ರಮಗಳ ಪ್ರದರ್ಶನ ನೀಡಲು ಆಗಮಿಸುವ ಕಲಾವಿದರಿಗೆ ವಾಹನ - ವಸತಿ ಸೌಲಭ್ಯ, ಸಾರ್ವಜನಿಕರಿಗೆ ಕುಡಿಯುವ ನೀರು, ಶೌಚಾಲಯದ ವ್ಯವಸ್ಥೆಯನ್ನು ಸರಿಯಾಗಿ ಕಲ್ಪಿಸಬೇಕು ಎಂದು ಸೂಚಿಸಿದರು.
ಕಿತ್ತೂರು ಉತ್ಸವ ಆಚರಣೆ ಸಂದರ್ಭದಲ್ಲಿ ಸ್ಥಳೀಯ ಹೊಟೆಲ್ ಮಾಲೀಕರು ದಿಢೀರನೇ ತಿಂಡಿ-ತಿನಿಸುಗಳ ದರವನ್ನು ಹೆಚ್ಚಿಸುತ್ತಾರೆ ಎಂಬ ದೂರು ಸಭೆಯಲ್ಲಿ ಕೇಳಿ ಬಂತು. ಹೆಚ್ಚುವರಿ ದರ ಆಕರಿಸದಂತೆ ತಾಲ್ಲೂಕು ಆಡಳಿತ ನಿಗಾ ವಹಿಸಬೇಕು ಎಂದೂ ಜಿಲ್ಲಾಧಿಕಾರಿ ತಿಳಿಸಿದರು.
ಅಪರ ಜಿಲ್ಲಾಧಿಕಾರಿ ಡಾ. ವಿ. ಎಸ್. ಚೌಗಲಾ, ಉಪವಿಭಾಗಾಧಿಕಾರಿ ಮೇಜರ್ ಸಿದ್ಧಲಿಂಗಯ್ಯ ಹಿರೇಮಠ, ತಹಶೀಲ್ದಾರ ಲೋಕೇಶ್ ಪಿ. ಎನ್. ವಾರ್ತಾ ಮತ್ತು ಪ್ರಚಾರ ಇಲಾಖೆಯ ಉಪನಿರ್ದೇಶಕ ಬಸವರಾಜ ಕಂಬಿ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ಆರ್. ಎಸ್. ಬಲೋಲ, ಸಹಾಯಕ ಕೃಷಿ ನಿರ್ದೇಶಕ ಹೊಸಮನಿ ಹಾಜರಿದ್ದರು.