ಕಿನ್ನಿಗೋಳಿ (ಮೂಲ್ಕಿ): ಮೂಲ್ಕಿ ಠಾಣಾ ವ್ಯಾಪ್ತಿಯ ಕಿನ್ನಿಗೋಳಿಯ ಮನೆಯೊಂದರಿಂದ ಚಿನ್ನಾಭರಣ ಮತ್ತು ನಗದು ಕಳವಾದ ಘಟನೆ ಶುಕ್ರವಾರ ಬೆಳಕಿಗೆ ಬಂದಿದೆ.
ಬಲವಿನ ಗುಡ್ಡೆಯ ನಡುಗೋಡು ಗ್ರಾಮದ ವಿನಯ ಶೆಟ್ಟಿ ಎಂಬವರ ಉದ್ಯಾನವನ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಸುಮಾರು 8 ಪವನ್ ಚಿನ್ನಾಭರಣ ಹಾಗೂ 13 ಸಾವಿರ ನಗದನ್ನು ಅಪಹರಿಸಲಾಗಿದೆ ಎಂದು ಮೂಲ್ಕಿ ಠಾಣೆಗೆ ನೀಡಿದ ದೂರಿನಲ್ಲಿ ಮನೆ ಮಾಲೀಕ ವಿನಯ ಶೆಟ್ಟಿ ತಿಳಿಸಿದ್ದಾರೆ.
ಗುರುವಾರ ವಿನಯ ಶೆಟ್ಟಿ ಅವರ ಸಹೋದರಿ, ಆಕೆಯ ಪತಿ ಮತ್ತು ಕುಟುಂಬಿಕರು ಯಾತ್ರಾ ಸ್ಥಳಗಳಿಗೆ ತೆರಳಲು ಮುಂಬೈಯಿಂದ ಊರಿಗೆ ಆಗಮಿಸಿದ್ದರು. ಅವರು ರಾತ್ರಿ ಮಲಗಿರುವಾಗ ಕಳ್ಳರು ತಮ್ಮ ಕೈ ಚಳಕ ನಡೆಸಿದ್ದಾರೆ.
ಶುಕ್ರವಾರ ಮುಂಜಾನೆ ಮನೆಯ ಹಿಂಬದಿಯ ಬಾಗಿಲು ತೆರೆದಿತ್ತು. ನಂತರ ಮನೆಯ ಕಪಾಟುಗಳು ಚೆಲ್ಲಾಪಿಲ್ಲಿಯಾಗಿದ್ದನ್ನು ಗಮನಿಸಿದಾಗ ಕಳ್ಳತನ ನಡೆದ ಬಗ್ಗೆ ಮನೆಯವರಿಗೆ ತಿಳಿಯಿತು. ಪರಿಶೀಲಿಸಿದಾಗ ಚಿನ್ನಾಭರಣ ಹಾಗೂ ನಗದು ಕಳವಾದುದು ತಿಳಿಯಿತು ಎಂದು ದೂರಿನಲ್ಲಿ ವಿವರಿಸಲಾಗಿದೆ. ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸಿದ್ದಾರೆ.