ಬಂಗಾರಪೇಟೆ: ರೈಲ್ವೆ ಹಳಿ ದಾಟಲು ಕಿರಿದಾದ ಕೆಳ ಸೇತುವೆ ನಿರ್ಮಿಸುತ್ತಿರುವುದನ್ನು ವಿರೋಧಿಸಿ ರೈತ ಸಂಘ, ಹಸಿರು ಸೇನೆ ಕಾರ್ಯಕರ್ತರು ಗುರುವಾರ ತಾಲ್ಲೂಕಿನ ಹುದುಕುಳ ಸಮೀಪ ರೈಲು ಹಳಿ ಮೇಲೆ ಕುಳಿತು ಪ್ರತಿಭಟನೆ ನಡೆಸಿದರು.
ಬಂಗಾರಪೇಟೆ-ಕೋಲಾರ ಮುಖ್ಯ ರಸ್ತೆಯಿಂದ ರೈಲ್ವೆ ಹಳಿ ದಾಟಿ ಸಾರ್ವಜನಿಕರು ಹುದುಕುಳ ಮೂಲಕ ವಟ್ರಕುಂಟೆ, ವೇಣುಗೋಪಾಲಪುರ ಮಾವಹಳ್ಳಿ ಹರಟಿ, ಬೇತಮಂಗಳ ಮತ್ತು ವೀಕೋಟೆಗೆ ತಲುಪಬೇಕು. ಅಲ್ಲದೆ ರಾಷ್ಟ್ರೀಯ ಹೆದ್ದಾರಿ 4ಕ್ಕೂ ಈ ಸೇತುವೆ ಸಂಪರ್ಕ ಕಲ್ಪಿಸುತ್ತದೆ.
ಈ ರಸ್ತೆ ಮೂಲಕವೇ ರೈತರು ಬೆಳೆದ ಬೆಳೆಗಳನ್ನು ಲಾರಿ, ಟ್ರ್ಯಾಕ್ಟರ್ಗಳಲ್ಲಿ ಮುಖ್ಯ ರಸ್ತೆಗಳಿಗೆ ಸಾಗಿಸುತ್ತಾರೆ. ಕೊಳವೆ ಬಾವಿ ಕೊರೆಯುವ ವಾಹನ ಕೂಡ ಇದೆ ರಸ್ತೆ ಮೂಲಕವೇ ಸಂಚರಿಸಬೇಕು.
ಆದರೆ ರೈಲ್ವೆ ಇಲಾಖೆ ನಿರ್ಮಿಸುತ್ತಿರುವ ಕೆಳ ಸೇತುವೆ ತೀರಾ ಚಿಕ್ಕದಾಗಿದ್ದು, ಲಾರಿ, ಟ್ರ್ಯಾಕ್ಟರ್ ಸಂಚರಿಸಲು ಆಗುವುದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ರೈತರು ಬೆಳೆದ ತರಕಾರಿ, ಧಾನ್ಯಗಳನ್ನು ಸಾಗಿಸಲು ತೊಂದರೆ ಆಗುತ್ತದೆ. ಸುಮಾರು 15 ಹಳ್ಳಿಗಳ ರೈತರಿಗೆ ಅನಾನುಕೂಲವಾಗಲಿದೆ. ಈ ಬಗ್ಗೆ ರೈಲ್ವೆ ಇಲಾಖೆ ಗಮನ ಹರಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ರಾಮೇಗೌಡ, ಉಪಾಧ್ಯಕ್ಷ ಅಂಜಿ, ಲಕ್ಷ್ಮಣ್, ವಜೀರ್, ಚಾಂದ್ ಪಾಷ, ಮುತ್ತಣ್ಣ, ಕೃಷ್ಣಪ್ಪ, ರವಿ, ಚಂದ್ರಪ್ಪ ಸ್ವಾಮಿ, ಮುತ್ತಾರ್, ಮನೋಹರ್, ಲಕ್ಷ್ಮಯ್ಯ, ರಾಮಕೃಷ್ಣಪ್ಪ, ರಾಮಚಂದ್ರ, ಮಂಜು, ಖಾದರ್ ಪಾಷ, ಅಬ್ದುಲ್, ನಾಗರಾಜಪ್ಪ ಇತರರಿದ್ದರು.