ಚಿತ್ರದುರ್ಗ: ಕಾಮಗಾರಿಯೊಂದರ ಟೆಂಡರ್ ಪ್ರಕ್ರಿಯೆಯಲ್ಲಿ ಅಕ್ರಮ ನಡೆಸಿದ ಆರೋಪದ ಮೇಲೆ ಪಂಚಾಯತ್ರಾಜ್ ಎಂಜಿನಿಯರ್ ವಿಭಾಗದ ಕಿರಿಯ ಎಂಜಿನಿಯರ್ ಆರ್. ಜಯಪ್ಪ ಅವರನ್ನು ಅಮಾನತು ಮಾಡಲಾಗಿದೆ.
ಮೊಳಕಾಲ್ಮುರು ತಾಲ್ಲೂಕು ಚಿಕ್ಕೇರಹಳ್ಳಿ ಗ್ರಾಮದಲ್ಲಿ ಅಂತರ್ಜಲ ಅಭಿವೃದ್ಧಿ ಕಾಮಗಾರಿಯನ್ನು ರೂ. 5 ಲಕ್ಷ ವೆಚ್ಚದಲ್ಲಿ ಕೈಗೊಳ್ಳಲು ಉದ್ದೇಶಿಸಲಾಗಿತ್ತು. ಆದರೆ, ಟೆಂಡರ್ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಉಲ್ಲಂಘಿಸಲಾಗಿತ್ತು. 2010ರ ಡಿಸೆಂಬರ್ 23 ಕೊನೆಯ ದಿನವಾಗಿದ್ದರೂ, ಡಿ. 27ರತನಕ ಮುಂದೂಡಿ ಅಂತರ್ಜಾಲದಲ್ಲಿ ತಿದ್ದುಪಡಿ ಮಾಡಲಾಗಿತ್ತು.
ಈ ಅಕ್ರಮವನ್ನು ದಿನಗೂಲಿ ನೌಕರ ಶಕೀಲ್ ಅಹಮ್ಮದ್ ಹಾಗೂ ಕಿರಿಯ ಎಂಜಿನಿಯರ್ ಆರ್. ಜಯಪ್ಪ ಎಸಗಿದ್ದಾರೆ ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ನಗರ ಠಾಣೆಯಲ್ಲಿ ಚಿಕ್ಕೇರಹಳ್ಳಿಯ ಗೋವಿಂದಪ್ಪ ಡಿಸೆಂಬರ್ 29ರಂದು ದೂರು ದಾಖಲಿಸಿದ್ದರು.
ಈ ಪ್ರಕರಣದ ಹಿನ್ನೆಲೆಯಲ್ಲಿ ಶಕೀಲ್ ಅಹಮದ್ ಅವರನ್ನು ಸರ್ಕಾರಿ ಸೇವೆಯಿಂದ ಕೈಬಿಡಲಾಗಿದೆ. ಜತೆಗೆ, ಜವಾಬ್ದಾರಿಯುತ ವಿಭಾಗದ ಅಧಿಕಾರಿಯಾಗಿದ್ದ ಆರ್. ಜಯಪ್ಪ ಅವರನ್ನು ಕರ್ತವ್ಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದ ಮೇರೆಗೆ ಅಮಾನತುಗೊಳಿಸಿ ಜಿಲ್ಲಾ ಪಂಚಾಯ್ತಿ ಸಿಇಒ ರಂಗೇಗೌಡ ಆದೇಶ ಹೊರಡಿಸಿದ್ದಾರೆ.