ಹಾಸನ: ಸಕಲೇಶಪುರ ತಾಲ್ಲೂಕಿನ ಪಶ್ಚಿಮಘಟ್ಟ ಅರಣ್ಯ ಪ್ರದೇಶದಲ್ಲಿ ಕೈಗೆತ್ತಿಕೊಂಡಿರುವ ಎರಡು ಕಿರು ಜಲ ವಿದ್ಯುತ್ ಯೋಜನೆಗಳನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಮಲೆನಾಡು ಜನಪರ ಹೋರಾಟ ಸಮಿತಿಯವರು ಶನಿವಾರ ಉದ್ದೇಶಿತ ಅಣೆಕಟ್ಟು ಪ್ರದೇಶದಲ್ಲಿ ಪ್ರತಿಭಟನೆ ನಡೆಸಿದರು.‘ಕೆಂಪು ಹೊಳೆಯ ಉಪನದಿ ಹೊಂಗಡಹಳ್ಳಕ್ಕೆ ಅಣೆಕಟ್ಟು ನಿರ್ಮಿಸಿ ಇಲ್ಲಿ ಜಲ ವಿದ್ಯುತ್ ಘಟಕ ಆರಂಭಿಸಲು ಖಾಸಗಿ ಸಂಸ್ಥೆಯವರಿಗೆ ಅನುಮತಿ ನೀಡಲಾಗಿದೆ.
ಅತಿ ಅಪರೂಪದ ಜೀವ ವೈವಿಧ್ಯ ಹೊಂದಿರುವ ಪಶ್ಚಿಮ ಘಟ್ಟದಲ್ಲಿ ಇಂತಹ ಯೋಜನೆಗಳಿಂದ ತುಂಬಲಾರದಂತಹ ನಷ್ಟ ಉಂಟಾಗುತ್ತದೆ.ಈಗಾಗಲೇ 100ಕ್ಕೂ ಹೆಚ್ಚು ಎಕರೆ ಅರಣ್ಯ ನಾಶವಾಗಿದ್ದು, ಆನೆಗಳ ವಲಸೆ ಮಾರ್ಗಕ್ಕೆ ಹಾನಿಯಾಗಿದೆ.ಕಾಡಾನೆಗಳು ನಾಡಿಗೆ ನುಗ್ಗುತ್ತಿವೆ.ಅಷ್ಟೆ ಅಲ್ಲದೆ ಖಾಸಗಿ ಸಂಸ್ಥೆಯವರು ವಿದ್ಯುತ್ ಉತ್ಪಾದಿಸಿ ಜನರಿಗೆ ನೀಡುತ್ತಿಲ್ಲ.ಬದಲಿಗೆ ಇವರು ಉತ್ಪಾದಿಸಿದ ವಿದ್ಯುತ್ ಖಾಸಗಿಯವರಿಗೇ ಮಾರಾಟವಾಗುತ್ತದೆ.
ಸ್ಥಳೀಯರ ಮತ್ತು ಪರಿಸರವಾದಿಗಳ ಭಾರಿ ಹೋರಾಟದ ಫಲವಾಗಿ ಗುಂಡ್ಯ ಜಲ ವಿದ್ಯುತ್ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.ಆದರೆ ಈಗ ಜಾರಿಯಲ್ಲಿರುವ ಕಿರು ಜಲ ವಿದ್ಯುತ್ ಯೋಜನೆಗಳೂ ಅಷ್ಟೇ ಅಪಾ ಯಕಾರಿ’ ಎಂದು ಮಲೆನಾಡು ಜನಪರ ಹೋರಾಟ ಸಮಿತಿಯ ಅಧ್ಯಕ್ಷ ಎಚ್.ಎ. ಕಿಶೋರ್ ಕುಮಾರ್ ಹೇಳಿದರು.ಪರಿಸರವಾದಿ ಹೆಮ್ಮಿಗೆ ಮೋಹನ್, ಗೊದ್ದು ಉಮೇಶ್, ಸಮಿತಿಯ ಕಾರ್ಯದರ್ಶಿ ಶಶಿ ಕುಮಾರ್, ಜಿಲ್ಲಾ ವನ್ಯಜೀವಿಗಳ ಸಂಘದ ಅಧ್ಯಕ್ಷ ಅತ್ತಿಹಳ್ಳಿ ದೇವರಾಜ್ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.