ತುರುವೇಕೆರೆ: ಇಂಡಿಯನ್ ಓವರ್ಸೀಸ್ ಬ್ಯಾಂಕ್ನ ತಂಡಗ ಶಾಖೆಯ ಸಿಬ್ಬಂದಿ ಸಾಲ ವಸೂಲಾತಿ ನೆಪದಲ್ಲಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ರೈತರು ಮಂಗಳವಾರ ಎಪಿಎಂಸಿ ಸಮೀಪ ಪ್ರತಿಭಟಿಸಿದರು.
ತಂಡಗ, ದೊಡ್ಡಾಘಟ್ಟ, ಕಣತೂರು, ಅರೆಮಲ್ಲೇನಹಳ್ಳಿ, ಮಾವಿನಹಳ್ಳಿ, ಆನೆಕೆರೆ ಸಮೀಪದ ಹತ್ತಾರು ಗ್ರಾಮಗಳಿಂದ ಪಟ್ಟಣಕ್ಕೆ ಆಗಮಿಸಿದ್ದ ನೂರಾರು ರೈತರು ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್ ಹಾಗೂ ರೈತ ಸಂಘದ ಮುಖಂಡ ಶ್ರೀನಿವಾಸಗೌಡರಲ್ಲಿ ತಮ್ಮ ಅಳಲು ತೋಡಿಕೊಂಡರು.
ಬ್ಯಾಂಕ್ನಲ್ಲಿ ಕೃಷಿ ಹಾಗೂ ಪಶು ಸಂಗೋಪನೆಗಾಗಿ ಸಾಲ ಪಡೆದಿರುವ ರೈತರಿಗೆ ತಿಳಿವಳಿಗೆ ಪತ್ರವನ್ನೂ ರವಾನಿಸದೇ ಬ್ಯಾಂಕ್ ಅಧಿಕಾರಿಗಳು ಏಕಪಕ್ಷೀಯವಾಗಿ ಕಾನೂನು ಕ್ರಮ ಕೈಗೊಳ್ಳುವ ಬೆದರಿಕೆ ಒಡ್ಡಿದ್ದಾರೆ. ರೈತರ ಖಾತೆಗಳನ್ನು ಪರೀಕ್ಷಿಸಲೂ ಅವಕಾಶ ಕೊಡುತ್ತಿಲ್ಲ. ವ್ಯವಸ್ಥಾಪಕರು ರೈತರೊಂದಿಗೆ ಅನುಚಿತ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದರು.
ದೊಡ್ಡಾಘಟ್ಟದ ಭೈರವೇಶ್ವರ ಯುವ ಸ್ವಸಹಾಯ ಸಂಘಕ್ಕೆ ತಾ.ಪಂ ವತಿಯಿಂದ 2003ರಲ್ಲಿ ರೂ.10 ಸಾವಿರ ಸುತ್ತುನಿಧಿ ಬಿಡುಗಡೆಯಾಗಿತ್ತು. ಈವರೆಗೆ ಸಂಘದ ಖಾತೆಗೆ ಹಣ ಜಮಾ ಆಗಿಲ್ಲ ಎಂದು ಆರೋಪಿಸಿದ ದೊಡ್ಡಾಘಟ್ಟದ ಕೃಷ್ಣ ಈಗ ಸಂಘ ಪಡೆದಿರುವ ಸಾಲ ವಸೂಲಾತಿಗೆ ಕಾನೂನು ಕ್ರಮ ಜರುಗಿಸಲು ಬೆದರಿಕೆ ಹಾಕುವುದು ಯಾವ ನ್ಯಾಯ? ಎಂದು ಪ್ರಶ್ನಿಸಿದರು.
ರೈತ ಸಂಘದ ಅಧ್ಯಕ್ಷ ಶ್ರೀನಿವಾಸ ಗೌಡ ಮಾತನಾಡಿ ರೈತರನ್ನು ಬ್ಯಾಂಕ್ ಅಧಿಕಾರಿಗಳು ಗೌರವದಿಂದ ನಡೆಸಿಕೊಳ್ಳಬೇಕು. ಯಾವುದೇ ಒಬ್ಬ ರೈತ ಪ್ರಾಣ ಕಳೆದುಕೊಂಡರೆ ಅದಕ್ಕೆ ಬ್ಯಾಂಕ್ ಹೊಣೆಯಾಗಬೇಕಾಗುತ್ತದೆ.
ಡಿ.13ರಂದು ಬ್ಯಾಂಕ್ ಅಧಿಕಾರಿಗಳ ರೈತ ವಿರೋಧಿ ಧೋರಣೆ ವಿರುದ್ಧ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.
ಎಪಿಎಂಸಿ ಅಧ್ಯಕ್ಷ ಕೊಂಡಜ್ಜಿ ವಿಶ್ವನಾಥ್, ಪ.ಪಂ. ಸದಸ್ಯ ವಿಜಯೇಂದ್ರ, ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಟಿ.ರಾಮಚಂದ್ರಯ್ಯ, ಪ್ರಸನ್ನ ಕುಮಾರ್, ಅಂಜನಪ್ಪ,ತಂಡಗದ ರಂಗಸ್ವಾಮಿ, ಕೆ.ಮಾವಿನಹಳ್ಳಿ ಗೀತಾ, ರಂಗಪ್ಪ, ಕೋಳಾಲದ ನಂಜಾಮರಿ, ನಂಜಮ್ಮ, ಹೆಡಿಗೇಹಳ್ಳಿ ಚಂದ್ರು, ಗೌರಮ್ಮ ಇತರೆ ನೂರಕ್ಕೂ ಹೆಚ್ಚು ರೈತರು ಭಾಗವಹಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.