ಬೆಂಗಳೂರು: ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ನೇಕಾರರಿಗೆ ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ ದಿ ಮೈಸೂರು ಪವರ್ಲೂಮ್ ಸಿಲ್ಕ್ ಮ್ಯಾನುಫ್ಯಾಕ್ಚರರ್ಸ್ ಕೊ - ಆಪರೇಟಿವ್ ಸೊಸೈಟಿಯ ಸದಸ್ಯರು ನಗರದ ಪುರಭವನದ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಸೊಸೈಟಿಯ ಅಧ್ಯಕ್ಷ ಎಂ.ಎಲ್.ಜಯರಾಮ್, `ವಿದ್ಯುತ್ ಮಗ್ಗಗಳಿಂದ ಬರುವ ಶಬ್ದ 80 ಡೆಸಿಬಲ್ಗಳಿಗಿಂತ ಹೆಚ್ಚಾಗಿರುತ್ತದೆ. ಮಗ್ಗಗಳಿಂದ ಶಬ್ದ ಹೊರಬರದಂತೆ ಶಬ್ದ ನಿಯಂತ್ರಕ ವ್ಯವಸ್ಥೆಯನ್ನು (ಸೌಂಡ್ ಪ್ರೂಫ್) ಅಳವಡಿಸಿಕೊಳ್ಳಬೇಕು ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಬಿಬಿಎಂಪಿ ಆರೋಗ್ಯ ಅಧಿಕಾರಿಗಳು ಒತ್ತಡ ತರುತ್ತಿದ್ದಾರೆ' ಎಂದು ಆರೋಪಿಸಿದರು.
`ಇತ್ತೀಚೆಗೆ ಅಧಿಕಾರಿಗಳು ಮಗ್ಗಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿದ್ದಾರೆ. ಇದರಿಂದ ಅನೇಕ ನೇಕಾರರಿಗೆ ತೊಂದರೆಯಾಗುತ್ತಿದೆ. ನೇಕಾರರಿಗೆ ತೊಂದರೆ ನೀಡುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು' ಎಂದು ಅವರು ಒತ್ತಾಯಿಸಿದರು.
`ದಿನದಿಂದ ದಿನಕ್ಕೆ ರೇಷ್ಮೆ ಬೆಲೆ ಹೆಚ್ಚಾಗುತ್ತಿದೆ. ಈ ಮಧ್ಯೆ ಅಧಿಕಾರಿಗಳ ಕಿರುಕುಳವೂ ಸೇರಿ ಮಗ್ಗಗಳನ್ನು ನಡೆಸುವುದು ಕಷ್ಟವಾಗುತ್ತಿದೆ. ಈ ವಿಚಾರದಲ್ಲಿ ಜವಳಿ ಸಚಿವರು ಮಧ್ಯ ಪ್ರವೇಶಿಸಿ ನೇಕಾರರ ಸಮಸ್ಯೆಗಳನ್ನು ಪರಿಹರಿಸಬೇಕು' ಎಂದು ಅವರು ಆಗ್ರಹಿಸಿದರು.