ಬೆಂಗಳೂರು: ಬಸವನಗುಡಿ ವಿಧಾನಸಭಾ ಕ್ಷೇತ್ರದ ಎಸ್ಯುಸಿಐ (ಸಿ) ಪಕ್ಷದ ಅಭ್ಯರ್ಥಿ ಎನ್.ರವಿ ಅವರ ಪರ ಕಿರುತೆರೆ ಕಲಾವಿದರು ಭಾನುವಾರ ಪ್ರಚಾರ ನಡೆಸಿದರು. ಹನುಮಂತನಗರದ ಪ್ರಮುಖ ರಸ್ತೆಗಳಲ್ಲಿ ಪಾದಯಾತ್ರೆ ನಡೆಯಿತು.
ಮನೆ ಮನೆಗೆ ತೆರಳಿ ಮತ ಯಾಚಿಸಿದ ರವಿ, ಅಭಿವೃದ್ಧಿ ಮತ್ತು ಹೊಸತನಕ್ಕಾಗಿ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಿರುತೆರೆ ನಿರ್ದೇಶಕ ಬಿ.ಸುರೇಶ, `ಇದುವರೆಗೂ ಕೆಟ್ಟ ಸರ್ಕಾರಗಳನ್ನು ನೋಡಿದ್ದಾಗಿದೆ. ಇನ್ನು ಮುಂದಾದರೂ ಹೊಸಬರನ್ನು ಗೆಲ್ಲಿಸಿ. ಹೊಸತನದಿಂದ ಮಾತ್ರ ಬದಲಾವಣೆ ತರಲು ಸಾಧ್ಯ. ಸಮಾಜದ ಬಗ್ಗೆ ಕಾಳಜಿ ಇರುವ, ಪ್ರಗತಿಪರ ಚಿಂತನೆಗಳಿರುವ ರವಿ ಅವರನ್ನು ಚುನಾವಣೆಯಲ್ಲಿ ಗೆಲ್ಲಿಸಿ' ಎಂದು ಮನವಿ ಮಾಡಿದರು.
ಪ್ರಕಾಶ್ ಅರಸ್ ಸೇರಿದಂತೆ ಹಲವು ಕಿರುತೆರೆ ನಟರು ಪಾದಯಾತ್ರೆಯಲ್ಲಿ ಪಾಲ್ಗೊಂಡು ಕರಪತ್ರಗಳನ್ನು ಹಂಚಿ ಮತ ಯಾಚಿಸಿದರು.