ಮುಡಿಪು: ನರಿಂಗಾನದ ಸರ್ಕಡೇಲು ಬಳಿ ಕುಸಿಯುವ ಭೀತಿಯಲ್ಲಿರುವ ಕಿರುಸೇತುವೆಯ ದುರಸ್ತಿಗೆ ಸಂಬಂಧಿಸಿ ಸದ್ಯದಲ್ಲೇ ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಸಭೆ ಕರೆದು ಸೇತುವೆ ರಕ್ಷಣೆಗೆ ಕ್ರಮಕೈಗೊಳ್ಳಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲು ತಿಳಿಸಿದರು.
ಮಂಗಳವಾರ ಸೇತುವೆಯಿರುವ ಸ್ಥಳಕ್ಕೆ ಸರ್ಕಡೇಲಿಗೆ ಭೇಟಿ ನೀಡಿದ ನಳಿನ್, 45 ವರ್ಷ ಹಳೆಯ ಸೇತುವೆ ಪರಿಶೀಲಿಸಿದರು.
ನರಿಂಗಾನದ ಕಿರುಸೇತುವೆ, ಕೇವಲ ನರಿಂಗಾನ ಗ್ರಾಮಕ್ಕೆ ಮಾತ್ರವಲ್ಲ ನೆರೆಯ ಕೇರಳ ರಾಜ್ಯಕ್ಕೂ ಸಂಪರ್ಕ ರಸ್ತೆಯಾಗಿದೆ. ಆ ನಿಟ್ಟಿನಲ್ಲಿ ಸೇತುವೆಯ ರಕ್ಷಣೆ ಅತ್ಯಗತ್ಯ. ಹೀಗಾಗಿ ನೂತನ ಸೇತುವೆ ನಿರ್ಮಾಣ ಅಥವಾ ಬದಲಿ ವ್ಯವಸ್ಥೆ ಮಾಡುವ ಕುರಿತಾಗಿ ಚರ್ಚಿಸಲಾಗುವುದು ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.
ಸಂಸದರ ಜತೆ ಮಂಗಳೂರು ವಿಧಾನಸಭಾ ಕ್ಷೇತ್ರ ಬಿಜೆಪಿ ಅಧ್ಯಕ್ಷ ಚಂದ್ರಹಾಸ್ ಉಳ್ಳಾಲ್, ಪ್ರಧಾನ ಕಾರ್ಯದರ್ಶಿ ಮೋಹನದಾಸ್ ಶೆಟ್ಟಿ ಕಿನ್ಯ, ಜಿಲ್ಲಾ ಪಂ ಚಾಯಿತಿ ಸದಸ್ಯ ಸಂತೋಷ್ ಕುಮಾರ್ ರೈ, ಚಂದ್ರಶೇಖರ್ ಉಚ್ಚಿಲ್, ನರಿಂಗಾನ ಗ್ರಾಮ ಪಂಚಾಯಿತಿ ಅಧ್ಯಕ್ಷ ಇಸ್ಮಾಯಿಲ್ ಮೀನಂಕೋಡಿ, ಮಂಜನಾಡಿ ಗ್ರಾಮ ಪಂಚಾುತಿ ಅಧ್ಯಕ್ಷ ಇಸ್ಮಾಯಿಲ್ ದೊಡ್ಡಮನೆ, ನರಿಂಗಾನ ಯುವಕ ಮಂಡಲದ ಅಧ್ಯಕ್ಷ ನವೀನ್ ಶೆಟ್ಟಿ ಮಂಗಲ್ಪಾಡಿ ಮೊದಲಾದವರು ಇದ್ದರು.
ಈ ಸೇತುವೆಯನ್ನು ದುರಸ್ತಿ ಮಾಡುವಂತೆ ಆಗ್ರಹಿಸಿ ನರಿಂಗಾನ ಗ್ರಾಮಸ್ಥರು ಒಂದು ತಿಂಗಳ ಹಿಂದೆ ರಸ್ತೆ ತಡೆ ನಡೆಸಿದ್ದರು.