ಇಸ್ಲಾಮಾಬಾದ್ (ಪಿಟಿಐ): ಭಾರತವು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸುತ್ತಿರುವ ಕಿಶನ್ಗಂಗಾ ಅಣೆಕಟ್ಟೆ ಕಾಮಗಾರಿ ಮುಂದುವರಿಸಲು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯ ಭಾರತಕ್ಕೆ ಸಮ್ಮತಿ ನೀಡಿ ಅಂತಿಮ ಆದೇಶ ಹೊರಡಿಸಿದೆ.
ಈ ಅಣೆಕಟ್ಟೆ ನಿರ್ಮಾಣಕ್ಕೆ ಪಾಕಿಸ್ತಾನ ತಕಾರರು ಸಲ್ಲಿಸಿತ್ತು.
ಮಧ್ಯಸ್ಥಿಕೆ ನ್ಯಾಯಾಲಯ ಫೆಬ್ರುವರಿಯಲ್ಲಿ ಹೊರಡಿಸಿದ ಆದೇಶಕ್ಕೆ ಸಂಬಂಧಿಸಿದಂತೆ ಭಾರತ ಸ್ಪಷ್ಟೀಕರಣ ಕೇಳಿದ ನಂತರ ಶುಕ್ರವಾರ ರಾತ್ರಿ ನ್ಯಾಯಾಲಯ ಆದೇಶ ಹೊರಡಿಸಿದೆ.
ಪಶ್ಚಿಮದ ನದಿಗಳಿಂದ ಜಲ ವಿದ್ಯುತ್ ಉತ್ಪಾದನೆಗೆ ನೀರು ಪಡೆಯುವ ಹಕ್ಕು ಇದೆ ಎನ್ನುವ ಭಾರತದ ವಾದವನ್ನು ಫೆಬ್ರುವರಿಯಲ್ಲಿ ಹೊರಡಿಸಿದ್ದ ಮಧ್ಯಂತರ ಆದೇಶದಲ್ಲಿ ನ್ಯಾಯಾಲಯ ಎತ್ತಿ ಹಿಡಿದಿತ್ತು.
1960ರ ‘ಇಂಡಸ್’ ಜಲ ಒಪ್ಪಂದದ ಪ್ರಕಾರ ಪಶ್ಚಿಮದ ನದಿಗಳ ನೀರು ಪಾಕಿಸ್ತಾನಕ್ಕೆ ಮೀಸಲಿವೆ.
‘ಪರಿಸರ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲ ಸಂದರ್ಭದಲ್ಲಿ ಕಿಶನ್ಗಂಗಾ ನದಿಯಲ್ಲಿ ಒಂಬತ್ತು ಕ್ಯೂಬಿಕ್ ಮೀಟರ್ ನೀರಿನ ನೈಸರ್ಗಿಕ ಹರಿವು ಇರಬೇಕು’ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿರುವುದಾಗಿ ಭಾರತೀಯ ರಾಯಭಾರ ಕಚೇರಿಯ ಪ್ರಕಟಣೆ ಹೇಳಿದೆ.
ಕಿಶನ್ಗಂಗಾ ಜಲವಿದ್ಯುತ್ ಯೋಜನೆಗೆ ಪರ್ಯಾಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಪಶ್ಚಿಮ ದಿಕ್ಕಿಗೆ ಹರಿಯುವ ಎಲ್ಲ ನದಿಗಳಿಗೆ ಇದೇ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.
‘ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯದಲ್ಲಿ ಪಾಕಿಸ್ತಾನ ದೊಡ್ಡ ವಿಜಯ ಸಾಧಿಸಿದೆ. ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಪಾಕಿಸ್ತಾನ ಕಿಶನ್ಗಂಗಾ ನದಿ ತೀರದ ದೇಶ ಎಂದು ನ್ಯಾಯಾಲಯ ಪರಿಗಣಿಸಿದೆ. ಝೇಲಮ್ ಮತ್ತು ಚಿನಾಬ್ ನದಿ ನೀರಿನ ಮೇಲೂ ಪಾಕ್ ತನ್ನ ಹಕ್ಕು ಸಾಧಿಸಿದೆ’ ಎಂದು ಪಾಕಿಸ್ತಾನದ ಜಲಸಂಪನ್ಮೂಲ ಸಚಿವ ಖ್ವಾಜಾ ಆಸೀಫ್ ಹೇಳಿದ್ದಾರೆ.
‘ಈ ಆದೇಶ ನೀರಿನ ಹಕ್ಕಿಗೆ ಸಂಬಂಧಿಸಿದಂತೆ ಭವಿಷ್ಯದಲ್ಲೂ ರಕ್ಷಣೆಗೆ ಸಹಕಾರಿಯಾಗಲಿದೆ’ ಎಂದು ಅವರು ಹೇಳಿದ್ದಾರೆ.