ರಾಣೆಬೆನ್ನೂರು: ನಗರದಲ್ಲಿ ಮೇಡ್ಲೇರಿ ರಸ್ತೆಯಲ್ಲಿ ಗಂಗಾಜಲ ತಾಂಡಾದ ಬಳಿ ಬೆಳಿಗ್ಗೆ ವಾಕಿಂಗ್ ಹೋದಾಗ ಹೊಲದಲ್ಲಿ ಬೆಳೆಗಳಿಗೆ ಹೊಡೆದ ಕ್ರಿಮಿನಾಶಕ ತಿಂದು ನೆಲದಲ್ಲಿ ಬಿದ್ದು ಸಾವು ಬದುಕಿನ ಮಧ್ಯೆ ಒದ್ದಾಡುತ್ತಿರುವುದನ್ನು ಕಂಡ ಗ್ರಾಮ ಲೆಕ್ಕಾಧಿಕಾರಿ ಮತ್ತು ಅವರ ಸಹೋದರ ಕೂಡಲೇ ಘಟನಾ ಸ್ಥಳಕ್ಕೆ ಹೋಗಿ ಎರಡು ನವಿಲುಗಳನ್ನು ಎತ್ತಿಕೊಂಡು ಬಂದು ನೀರು ಕುಡಿಸಿ, ಉಸಿರಾಟಕ್ಕೆ ಅನುಕೂಲ ಮಾಡಿ ಪ್ರಥಮ ಚಿಕಿತ್ಸೆ ನೀಡಿದಾಗ ನವಿಲುಗಳು ನಿಟ್ಟುಸಿರು ಬಿಟ್ಟವು.
ಬಳಿಕ ಅವರು ನವಿಲುಗಳನ್ನು ಹೊತ್ತುಕೊಂಡು ತಮ್ಮ ಮನೆಗೆ ಒಯ್ದು ತಕ್ಷಣ ತಮ್ಮ ವಾರ್ಡ್ನಲ್ಲಿದ್ದ ನಿವೃತ್ತ ಪಶು ವೈದ್ಯ ಡಾ.ನಾಗೆಂದ್ರಪ್ಪ ಊದಗಟ್ಟಿ ಅವರಿಂದ ಚಿಕಿತ್ಸೆ ಕೊಡಿಸಿದಾಗ ಮತ್ತಷ್ಟು ಚೇತರಿಸಿಕೊಂಡವು.
ನಂತರ ಕೃಷ್ಣಮೃಗ ಅಭಯಾರಣ್ಯದಲ್ಲಿರುವ ಅರಣ್ಯ ಇಲಾಖೆ ಅಧಿಕಾರಿಗಳ ಜೊತೆಗೆ ದೂರವಾಣಿ ಮೂಲಕ ಸಂಪರ್ಕಿಸಿ ಸೋಮವಾರ ಮಧ್ಯಾಹ್ನ ಎರಡು ನವಿಲುಗಳನ್ನು ಇಲಾಖೆ ಸಿಬ್ಬಂದಿಯವರಾದ ಬಿ.ಆರ್. ಲಕ್ಷ್ಮೀನಾರಾಯಣ, ಕೆ.ಸಿ.ಧರ್ಮಾಧಿಕಾರಿ, ಪರಶುರಾಮ ಖಂಡಪ್ಪಳವರ, ಚಂದ್ರಶೇಖರ ಜಾನವೇರಿ ಅವರಿಗೆ ಒಪ್ಪಿಸಲಾಯಿತು.
ಸಹೋದರರ ಪ್ರಾಣಿಗಳ ಮೇಲಿನ ಪ್ರೀತಿಯಿಂದ ಎರಡು ನವಿಲುಗಳನ್ನು ಪ್ರಾಣಾಪಾಯದಿಂದ ಪಾರು ಮಾಡಿ ಅರಣ್ಯ ಇಲಾಖೆ ಅಧಿಕಾರಿಗಳು ಸಹೋದರರಿಗೆ ಅಭಿನಂದನೆ ಸಲ್ಲಿಸಿದರು.