ಮಂಗಳೂರು: ದಾಸರು ರಚಿಸಿದ ಕೀರ್ತನೆಗಳಲ್ಲಿ ಜೀವನ ಮೌಲ್ಯಗಳಿದ್ದು, ಅವುಗಳು ಬದುಕಿಗೆ ಉತ್ತಮ ಮಾರ್ಗದರ್ಶನ ನೀಡಿವೆ. ಮನೆಗಳಲ್ಲಿ ಸಂಜೆ ವೇಳೆ ನಡೆಯುತ್ತಿದ್ದ ಭಜನೆ ಸಂಪ್ರದಾಯ ಮುಂದುವರಿಯಬೇಕು ಎಂದು ಶಶಿಧರ್ ಗುರಿಕಾರ ಹೊಸಬೆಟ್ಟು ಹೇಳಿದರು.
ನಗರದ ಉರ್ವ ಬೋಳೂರು ಮಾರಿಯಮ್ಮ ದೇವಸ್ಥಾನದ ವರ್ಷಾವಧಿ ಮಹೋತ್ಸವ ಪೂರ್ವಭಾವಿಯಾಗಿ ನಡೆಯುವ ಸಂಧ್ಯಾ ಭಜನೆಗೆ ಇತ್ತೀಚೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕೆ.ಪ್ರಶಾಂತ್ ಕುಮಾರ್, ದೇವಸ್ಥಾನ ಆಡಳಿತ ಮೊಕ್ತೇಸರ ದೇವದಾಸ್ ಪುತ್ರನ್ ಬೋಳೂರು, ಮೊಕ್ತೇಸರರಾದ ಎಂ.ಜನಾರ್ದನ್, ಕೇಶವ ಡಿ.ಅಮೀನ್, ಪಣಂಬೂರು, ಮಂಗಳೂರು 7 ಪಟ್ಣ ಮೊಗವೀರ ಸಂಯುಕ್ತ ಸಭೆ ಅಧ್ಯಕ್ಷ ಯಾದವ ಸಾಲ್ಯಾನ್ ಬೊಕ್ಕಪಟ್ಣ, ಸಾಹಿತಿ ಯಶವಂತ ಬೋಳೂರು ಮತ್ತಿತರರು ಇದ್ದರು.
`ಸಾಮಾಜಿಕ ಸಮಸ್ಯೆಗೆ ಸ್ಪಂದಿಸಿ~
ಮಂಗಳೂರು: ಸಾಮಾಜಿಕ ಕಳಕಳಿಯೊಂದಿಗೆ ಪರಿಸರದ ಸಮಸ್ಯೆಗಳಿಗೆ ಸ್ಪಂದಿಸಬೇಕು. ಜನಸಾಮಾನ್ಯರಿಗೆ, ಕಾರ್ಮಿಕರಿಗೆ ಸರ್ಕಾರದ ಸವಲತ್ತು ದೊರಕಿಸಿಕೊಡಲು ಶ್ರಮಿಸಬೇಕು ಎಂದು ಕೊಂಚಾಡಿ ರಾಮಾಶ್ರಮ ಶಾಲೆ ಮುಖ್ಯ ಶಿಕ್ಷಕ ಗುರುರಾಜ ಭಟ್ ಹೇಳಿದರು.
ವೆನ್ಲಾಕ್ ಆಸ್ಪತ್ರೆ, ಡಿವೈಎಫ್ಐ ಕೊಂಚಾಡಿ ಘಟಕ, ವೀರಮಾರುತಿ ವ್ಯಾಯಾಮ ಶಾಲೆ ಜಂಟಿಯಾಗಿ ಕೊಂಚಾಡಿ ರಾಮಾಶ್ರಮ ಶಾಲೆಯಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಘಟಕ ಕಾರ್ಯದರ್ಶಿ ದಯಾನಂದ ಶೆಟ್ಟಿ, ರಕ್ತದಾನ ಶಿಬಿರ ಸೌಹಾರ್ದ ಸಂಕೇತ ಎಂದು ನುಡಿದರು.
ಸಿಪಿಎಂ ಯೆಯ್ಯಾಡಿ-ಕೊಂಚಾಡಿ ಶಾಖೆ ಕಾರ್ಯದರ್ಶಿ ಶಶಿಕುಮಾರ್ ಗುಂಡಳಿಕೆ ಅಧ್ಯಕ್ಷತೆ ವಹಿಸಿದ್ದರು. ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಾಹಿದ್, ಕಟ್ಟಡ ಕಾರ್ಮಿಕ ಸಂಘಟನೆಯ ಹರಿಶ್ಚಂದ್ರ ಬೊಳ್ಳುಗುಡ್ಡೆ, ಡಿವೈಎಫ್ಐ ಘಟಕ ಕಾರ್ಯದರ್ಶಿ ನವೀನ್ ಬಿ., ಕ್ರಿಸ್ಟೋಫರ್ ಇದ್ದರು.