ಕುಂದಾಪುರ: `ಸಾಮಾನ್ಯ ವರ್ಗದ ಕುಟುಂಬದಲ್ಲಿ ಜನಿಸಿದ ನನಗೆ ರಾಜಕಾರಣದಲ್ಲಿ ಯಾವುದೇ ಅಂತಸ್ತು, ಅಧಿಕಾರ ಶಾಶ್ವತವಲ್ಲ ಎನ್ನುವ ಸತ್ಯದ ಅರಿವಿದೆ. ಬಡತನ ಹಾಗೂ ಇತರ ಕಾರಣದಿಂದ ಉನ್ನತ ಶಿಕ್ಷಣದ ಅವಕಾಶ ದೊರಕದೆ ಇದ್ದರೂ, ಜನ ಸಾಮಾನ್ಯರ ನಾಡಿ ಮಿಡಿತವನ್ನು ಅರಿತುಕೊಳ್ಳುವ ಶಿಕ್ಷಣವನ್ನು ರಾಜಕಾರಣ ಕಲಿಸಿ ಕೊಟ್ಟಿದೆ~ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುಂದಾಪುರದ ಶ್ರೀ ನಾರಾಯಣ ಗುರು ಸಭಾಭವನದಲ್ಲಿ ತಾಲ್ಲೂಕು ಬಿಲ್ಲವ ಸೇವಾ ಸಮಾಜದ ವತಿಯಿಂದ ಭಾನುವಾರ ನೀಡಿದ ಸನ್ಮಾನ ಸ್ವೀಕರಿಸಿ ಸಂಘದ 21ನೇ ವರ್ಷದ ವಿದ್ಯಾರ್ಥಿ ವೇತನವನ್ನು ವಿತರಿಸಿ ಅವರು ಮಾತನಾಡಿದರು.
`ಛಾಯಾಚಿತ್ರಗ್ರಾಹಕನಾಗಿ ವೃತ್ತಿ ಜೀವನ ಪ್ರಾರಂಭಿಸಿದ್ದ, ನಾನು ಎಂದೂ ಕೂಡ ಶಾಸಕನಾಗುವ ಅಥವಾ ಮಂತ್ರಿಯಾಗುವ ಕನಸು ಕಂಡಿರಲಿಲ್ಲ~ ಎಂದು ವಿನೀತರಾಗಿ ಹೇಳಿದರು.
ಉದ್ಯಮಿ ಪ್ರಮೋದ್ ಮಧ್ವರಾಜ್ ಮಾತನಾಡಿ `ಪ್ರಪಂಚದಲ್ಲಿ ಶೇ 70ರಷ್ಟು ಯುವಕರನ್ನು ಹೊಂದಿದ ದೇಶ ನಮ್ಮದು. ನಮ್ಮ ದೇಶಕ್ಕೆ ಯುವ ನಾಯಕರ ಅಗತ್ಯವಿದೆ~ ಎಂದರು.
ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಗೌರವಾಧ್ಯಕ್ಷ ಸುರೇಶ ಎಸ್.ಪೂಜಾರಿ ಪಡುಕೋಣೆ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪುರಸಭಾಧ್ಯಕ್ಷ ಕೆ.ಮೋಹನದಾಸ ಶೆಣೈ, ಮಾಜಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಾಣಿಗೋಪಾಲ, ಬಿಲ್ಲವ ಸಂಘದ ಪ್ರಧಾನ ಕಾರ್ಯದರ್ಶಿ ಮೂಡುರ ಮಾಸ್ತರ್, ನಾರಾಯಣಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಯ ಕಾರ್ಯದರ್ಶಿ ನಾರಾಯಣ ಬಿಲ್ಲವ ಹಳೆಅಳಿವೆ, ಶ್ರೀ ನಾರಾಯಣಗುರು ಯುವಕ ಮಂಡಲದ ಅಧ್ಯಕ್ಷ ಗೋಪಾಲ ಪೂಜಾರಿ ವಡೇರಹೋಬಳಿ ಉಪಸ್ಥಿತರಿದ್ದರು. ಇದೇ ಸಂದರ್ಭ ಕಳೆದ ಎಸ್ಎಸ್ಎಲ್ಸಿ ಯಲ್ಲಿ ಅತ್ಯಧಿಕ ಅಂಕ ಗಳಿಸಿದ ಸುಪ್ರಿಯಾ, ಮಾಲತಿ ಹಾಗೂ ಶಿಲ್ಪಾ ಅವರನ್ನು ಗೌರವಿಸಲಾಯಿತು.