ಚಿತ್ರದುರ್ಗ: ರಾಜ್ಯದಲ್ಲಿ ಕುಕ್ಕುಟ ಮಹಾ ಮಂಡಳಿ ಅಭಿವೃದ್ಧಿ ಮಾಡಲು ಕೆಎಂಎಫ್ ಮಾದರಿಯಲ್ಲಿ ಉದ್ಯಮಿಗಳು ಹಾಗೂ ವ್ಯಾಪಾರಸ್ಥರಿಗೆ ನೆರವನ್ನು ನೀಡಲಾಗುತ್ತದೆ ಎಂದು ರಾಜ್ಯ ಸಹಕಾರ ಕುಕ್ಕುಟ ಮಹಾಮಂಡಳಿ ಅಧ್ಯಕ್ಷರಾದ ಡಿ.ಎಸ್.ರುದ್ರಮುನಿ ತಿಳಿಸಿದರು.
ಭಾನುವಾರ ಭರಮಸಾಗರದಲ್ಲಿ ಗ್ರಾಮಸ್ಥರು ಹಾಗೂ ಮರ್ಚೆಂಟ್ಸ್ ಸಂಘದ ವತಿಯಿಂದ ಆಯೋಜಿಸಿದ್ದ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಕಳೆದ 6 ವರ್ಷಗಳಿಂದ ಸರ್ಕಾರವು ಕುಕ್ಕುಟ ಉದ್ಯಮ ಬೆಳೆಸಲು ಹೆಚ್ಚಿನ ಉತ್ತೇಜನ ನೀಡಿ ಪ್ರತಿ ವರ್ಷ ಸರ್ಕಾರದಿಂದ ರೂ 5 ಕೋಟಿ ನೀಡುತ್ತಾ ಬಂದಿದೆ ಎಂದರು.
ಜಿಲ್ಲೆಯಲ್ಲಿ ಕುಕ್ಕುಟ ಉದ್ಯಮಕ್ಕೆ ಪೂರಕವಾದ ವಾತಾವರಣವಿದೆ. ಇದಕ್ಕಾಗಿ ಗುಣಮಟ್ಟದ ಕೋಳಿಮರಿಗಳನ್ನು ಉತ್ಪಾದನೆ ಮಾಡಿ ಪೌಲ್ಟ್ರಿ ಫಾರಂಗಳಿಗೆ ನೀಡಲು ಚಿತ್ರದುರ್ಗದಲ್ಲಿ ಘಟಕ ಸ್ಥಾಪಿಸಲು ರೂ10.5 ಕೋಟಿ ಅನುದಾನವು ಮಂಜೂರಾಗಿದೆ. ಇದಕ್ಕಾಗಿ 5 ಎಕರೆ ಜಮೀನು ಬೇಕಾಗಿದೆ. ಜಮೀನನ್ನು ಆದಷ್ಟು ಶೀಘ್ರವಾಗಿ ಪಡೆದು ಘಟಕ ಸ್ಥಾಪಿಸಿ ಗುಣಮಟ್ಟದ ಕೋಳಿಮರಿಗಳ ಉತ್ಪಾದನೆ ಮಾಡಿ ಸಾಕಾಣಿಕೆಗೆ ನೀಡಲಾಗುತ್ತದೆ ಎಂದರು.
ವಿಧಾನ ಪರಿಷತ್ ಸದಸ್ಯ ಜಿ.ಎಚ್. ತಿಪ್ಪಾರೆಡ್ಡಿ ಮಾತನಾಡಿ, ಸರ್ಕಾರ ತೆರೆಮರೆಯಲ್ಲಿ ಕೆಲಸ ಮಾಡುತ್ತಿರುವ ಅನೇಕ ನಿಗಮ ಮಂಡಳಿಗಳಿಗೆ ಇಲ್ಲಿನ ಉದ್ಯಮಗಳನ್ನು ಆಧರಿಸಿ ನೆರವು ನೀಡುತ್ತಾ ಬಂದಿದೆ. 5 ವರ್ಷಗಳಿಂದ ಸರ್ಕಾರ ಪ್ರತಿ ವರ್ಷ ಪೌಲ್ಟ್ರಿ ಫಾರಂಗಳ ಅಭಿವೃದ್ಧಿಗಾಗಿ ಕುಕ್ಕುಟ ಮಹಾಮಂಡಳಿಗೆ ರೂ 5 ಕೋಟಿ ನೀಡುತ್ತಿದೆ. ಈ ಉದ್ಯಮದಲ್ಲಿ ತೊಡಗಿದವರು ಮಂಡಳಿಯ ಸಹಕಾರ ಪಡೆಯಬೇಕು ಎಂದು ತಿಳಿಸಿದರು.
ಶಾಸಕ ಎಂ. ಚಂದ್ರಪ್ಪ ಮಾತನಾಡಿ, ಕುಕ್ಕುಟದ ಶ್ರೇಯೋಭಿವೃದ್ಧಿಗಾಗಿ ಸರ್ಕಾರ ಸಹಾಯ ಮಾಡುತ್ತಿದೆ ಎಂದರು.ತಾ.ಪಂ. ಸದಸ್ಯೆ ನಿರ್ಮಲಾ ಮಲ್ಲೇಶಪ್ಪ, ಮಹಾಮಂಡಳಿ ನಿರ್ದೇಶಕರಾದ ನಾಗರಾಜ, ಡಿ.ಕೆ. ಕಾಂತರಾಜು, ಲತಾ ರಮೇಶ್, ಜಿ.ಪಂ. ಮಾಜಿ ಸದಸ್ಯರಾದ ಡಿ.ವಿ. ಶರಣಪ್ಪ, ಎಚ್.ಎನ್. ತಿಪ್ಪೇಸ್ವಾಮಿ, ಗ್ರಾಮದ ಮುಖಂಡರಾದ ಸಕ್ಲೇನ್ ಪಾಷಾ, ಎ.ಎಸ್. ನಾರಪ್ಪ, ಐ.ಎಂ. ಓಂಕಾರಯ್ಯ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.