ಬೆಂಗಳೂರು: ನಗರದ ಸಿಎಂಎಚ್ ರಸ್ತೆಯಲ್ಲಿ ಶುಕ್ರವಾರ ಸಂಜೆ ಆರ್ಟಿಐ ಕಾರ್ಯಕರ್ತ ಅಲಂ ಪಾಷ ಅವರ ಕಾರನ್ನು ಬೈಕ್ನಲ್ಲಿ ಹಿಂಬಾಲಿಸಿದ ಮೂವರು ಅಪರಿಚಿತ ವ್ಯಕ್ತಿಗಳು, ಅವರ ಕಾರಿನ ಗಾಜುಗಳನ್ನು ಪುಡಿ ಮಾಡಿ ಪರಾರಿಯಾಗಿದ್ದಾರೆ.
ಪಾಷ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಮುರುಗೇಶ್ ನಿರಾಣಿ, ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿ ಹಲವು ಐಎಎಸ್ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.
`ಪ್ರಾರ್ಥನೆ ಮಾಡಲು ಹಲಸೂರಿನಲ್ಲಿರುವ ಮಸೀದಿಗೆ ಹೋಗಿದ್ದೆ. ಸಂಜೆ 6.50ರ ಸುಮಾರಿಗೆ ಕಾರಿನಲ್ಲಿ ಮನೆಗೆ ಹಿಂದಿರುಗುವಾಗ ದುಷ್ಕರ್ಮಿಗಳು ಎರಡು ಬೈಕ್ಗಳಲ್ಲಿ ನನ್ನನ್ನು ಹಿಂಬಾಲಿಸಿದರು. ಇದರಿಂದ ಗಾಬರಿಯಾದ ನಾನು ವೇಗವಾಗಿ ಕಾರು ಚಾಲನೆ ಮಾಡಿಕೊಂಡು ಮನೆ ಸೇರಿದೆ. ದುಷ್ಕರ್ಮಿಗಳು, ಹೊರಗೆ ನಿಲ್ಲಿಸಿದ್ದ ಕಾರಿನ ಗಾಜನ್ನು ಪುಡಿ ಮಾಡಿ ಪರಾರಿಯಾದರು' ಎಂದು ಪಾಷ ತಿಳಿಸಿದರು.
`ನನಗೆ ಹಾಗೂ ಕುಟುಂಬಕ್ಕೆ ಪೊಲೀಸ್ ರಕ್ಷಣೆ ಒದಗಿಸುವಂತೆ ಈ ಹಿಂದೆಯೇ ಹಿರಿಯ ಪೊಲೀಸ್ ಅಧಿಕಾರಿಗಳಲ್ಲಿ ಮನವಿ ಮಾಡಿದ್ದೆ. ಆದರೆ, ಈವರೆಗೂ ನಮಗೆ ಯಾವುದೇ ಭದ್ರತೆ ಒದಗಿಸಿಲ್ಲ. ಮಾರ್ಚ್ ತಿಂಗಳಲ್ಲಿ ಮಗಳ ಮೇಲೂ ಹಲ್ಲೆ ನಡೆದಿತ್ತು' ಎಂದರು. ಘಟನೆ ಸಂಬಂಧ ಇಂದಿರಾನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಶೋಧ ನಡೆಸುತ್ತಿದ್ದಾರೆ.